ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ. ಇದು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ಬಾಮೀಜಿ ಹೇಳಿದರು.
ಗುರುವಾರ ಅಂಜಲಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಯ ಬೆದರಿಕೆ ಕುರಿತು ಅಂಜಲಿ ಅವರ ಸಹೋದರಿ ಪೊಲೀಸರ ಗಮನಕ್ಕೆ ತಂದಿದ್ದಳು. ರಕ್ಷಣೆ ನೀಡುವಂತೆ ಕೋರಿದ್ದಳು. ಪೊಲೀಸರು ಆಗಲೇ ಎಚ್ಚೆತ್ತುಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದರು.
ಅಂಜಲಿ ಕೊಲೆ ಅಮಾನವೀಯ ಘಟನೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸುರಕ್ಷಿತವಾಗಿ ಬದುಕಲು ಅಸಾಧ್ಯವಾದ ವಾತಾವರಣ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪ್ರೇಮ ಪ್ರಕರಣದ ಕಾರಣಕ್ಕೆ ಈ ರೀತಿ ಯುವತಿಯರನ್ನು ಅಮಾನುಷವಾಗಿ ಕೊಲೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಎಚ್ಚರ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚುನಾವಣೆ ಇದ್ದ ಕಾರಣಕ್ಕೆ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ರಾಜಕಾರಣಿಗಳು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋದರು. ಈಗ ಯಾವ ರಾಜಕಾರಣಿಗಳೂ ಅಂಜಲಿ ಅವರ ಮನೆಗೆ ಭೇಟಿ ನೀಡದಿರುವುದು ಅವರು ಎಷ್ಟು ನೀತಿಗೆಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.
ಸರ್ಕಾರ ಕೂಡಲೇ ಅಂಜಲಿ ಕುಟುಂಬಕ್ಕೆ ಮನೆ ಮಂಜೂರು ಮಾಡಬೇಕು. ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಕೊಲೆ ಖಂಡಿಸಿ ಅಂಬಿಗೇರ ಸಮಾಜದ ಸ್ವಾಮೀಜಿಯೊಂದಿಗೆ ಶುಕ್ರವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಶಿರಹಟ್ಟಿ ಮಠವು ಅಂಜಲಿ ಅವರ ಇಬ್ಬರು ಸಹೋದರಿಯರನ್ನು ದತ್ತು ತೆಗೆದುಕೊಳ್ಳಲಿದ್ದು, ಅವರಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದರು.