ನವಲಗುಂದ: ಪುರಸಭೆ ಸಾಮಾನ್ಯ ಸಭೆ ನಡೆಸದಂತೆ ಬಿಜೆಪಿ ಸದಸ್ಯರು ಅಡ್ಡಪಡಿಸಿದ ಕಾರಣ ಬಿಜೆಪಿ– ಕಾಂಗ್ರೆಸ್ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು.
ಬಿಜೆಪಿ ಬೆಂಬಲದಿಂದ ಅಧ್ಯಕ್ಷ– ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಸಭೆ ನಡೆಸುವ ನೈತಿಕತೆ ಇಲ್ಲ ಎಂದು ಪಕ್ಷದ ಸದಸ್ಯರು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ವಾಗ್ವಾದವಾಗಿ, ಕೊನೆಗೆ ಕೈ ಕೈ ಮಿಲಾಯಿಸುವ ಹಂತ ತಲುಪಿತು.
‘ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ಹೊರಗೆ ಇಡಲು ನಮಗೆ (ಕಾಂಗ್ರೆಸ್) ನೀವು ಬೆಂಬಲ ನೀಡಿದ್ದೀರ. ನಾವು ನಿಮ್ಮ ಮನೆ ಬಾಗಿಲಿಗೆ ಬಂದು ಬೆಂಬಲ ಕೇಳಿರಲಿಲ್ಲ’ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ಹೇಳಿದರು.
ಸಭೆ ನಡಾವಳಿ ಪುಸ್ತಕಕ್ಕೆ ಸಹಿ ಹಾಕಿದವರು ಮಾತ್ರ ಒಳಗೆ ಇರಬೇಕು. ಉಳಿದವರನ್ನು ಹೊರಗೆ ಕಳುಹಿಸಿ ಎಂದು ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿ ವಿರೇಶ ಹಸಬಿ ಅವರಿಗೆ ಹೇಳಿದರು. ಹೊರ ಹಾಕಲು ಮುಂದಾದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಹಿ ಹಾಕಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡರು. ನಂತರ ಸಾಮಾನ್ಯ ಸಭೆ ನಡೆಯಿತು.