ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

108 ತುರ್ತು ವಾಹನ: ನೂರೆಂಟು ಸಮಸ್ಯೆ

ಹದಗೆಟ್ಟ ರಸ್ತೆಗಳಿಂದಾಗಿ ಸೇವೆಯಲ್ಲಿ ವ್ಯತ್ಯಯ; ಪದೇ ಪದೇ ದುರಸ್ತಿಗೆ ಬರುವ ವಾಹನಗಳು
Last Updated 21 ನವೆಂಬರ್ 2022, 7:06 IST
ಅಕ್ಷರ ಗಾತ್ರ

ಗದಗ: ತುರ್ತು ಸಂದರ್ಭದಲ್ಲಿ ರೋಗಿಗಳ ಸೇವೆಗೆ ಶೀಘ್ರ ಲಭ್ಯವಾಗಬೇಕಿದ್ದ 108 ವಾಹನಗಳು ಸರಿಯಾಗಿ ಸೇವೆ ಸಲ್ಲಿಸಲು ಜಿಲ್ಲೆಯಲ್ಲಿ ಹಲವು ಅಡ್ಡಿಗಳಿವೆ. ಹದಗೆಟ್ಟಿರುವ ರಸ್ತೆಗಳಿಂದಾಗಿ ಸಮಯ ವ್ಯರ್ಥವಾಗುತ್ತಿದ್ದು, ಹಲವು ರೋಗಿಗಳು ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್‌ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿ ಒಟ್ಟು 39 ಅಂಬುಲೆನ್ಸ್‌ಗಳಿವೆ. ಅದರಲ್ಲಿ 12 ವಾಹನಗಳು 108 ತುರ್ತು ಸೇವೆಗೆ ಮೀಸಲಿವೆ. 108 ಅಂಬುಲೆನ್ಸ್‌ಗಳನ್ನು ಜಿವಿಕೆ– ಎರ್ಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಅಂಡ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನವರು ನಿರ್ವಹಣೆ ಮಾಡುತ್ತಿದ್ದಾರೆ.

ಗದಗ ತಾಲ್ಲೂಕಿನಲ್ಲಿ ಗದಗ– ಬೆಟಗೇರಿ, ಮುಳಗುಂದ ಹಾಗೂ ಲಕ್ಕುಂಡಿಯಲ್ಲಿ ತಲಾ ಒಂದೊಂದು 108 ಅಂಬುಲೆನ್ಸ್‌ ಇವೆ. ರೋಣ ಹಾಗೂ ಗಜೇಂದ್ರಗಡದಲ್ಲಿ ತಲಾ ಒಂದು, ನರಗುಂದ ತಾಲ್ಲೂಕಿನಲ್ಲಿ ಎರಡು ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಒಂದು ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ ಎರಡು ಅಂಬುಲೆನ್ಸ್‌ಗಳಿವೆ. ಇರುವ 12 ಅಂಬುಲೆನ್ಸ್‌ಗಳಲ್ಲಿ ಮೂರು ದುರಸ್ತಿಯಲ್ಲಿದ್ದು, ಸದ್ಯ ಒಂಬತ್ತು ಅಂಬುಲೆನ್ಸ್‌ಗಳು ಸೇವೆ ಒದಗಿಸುತ್ತಿವೆ. ಇತ್ತೀಚೆಗೆ ಬಂದಿರುವ ಬಿಎಸ್‌ 4 ಹಾಗೂ ಬಿಎಸ್‌ 6 ವಾಹನಗಳು ಹದಗೆಟ್ಟ ರಸ್ತೆಗಳ ಕಾರಣದಿಂದಾಗಿ ಪದೇ ಪದೇ ದುರಸ್ತಿಗೆ ಬರುತ್ತಿದ್ದು, ರೋಗಿಗಳು ಸೇವೆಯಿಂದ ವಂಚಿತವಾಗುವಂತಿವೆ.

‘ಗದಗ ಜಿಲ್ಲೆಯಲ್ಲಿ ಒಟ್ಟು 12 ತುರ್ತು ವಾಹನಗಳಿದ್ದು ಅದರಲ್ಲಿ ಎಂಟು ವಾಹನಗಳು ಬಿಎಲ್‌ಎಸ್‌ (ಬೇಸಿಕ್‌ ಲೈಫ್‌ ಸಫೋರ್ಟ್‌) ಅಂಬುಲೆನ್ಸ್‌ಗಳು ಹಾಗೂ ನಾಲ್ಕು ಎಎಲ್‌ಎಸ್‌ (ಅಡ್ವಾನ್ಸ್ಡ್‌ ಲೈಫ್‌ ಸಫೋರ್ಟ್‌) ಅಂಬುಲೆನ್ಸ್‌ಗಳಿವೆ. ಬಿಎಲ್‌ಎಸ್‌ನಲ್ಲಿ ಇಎಂಟಿ (ಎಮರ್ಜೆನ್ಸಿ ಮೆಡಿಕಲ್‌ ಟೆಕ್ನೀಷಿಯನ್‌) ಹಾಗೂ ಚಾಲಕ ಇರುತ್ತಾರೆ. ಎಎಲ್‌ಎಸ್‌ನಲ್ಲಿ ವೆಂಟಿಲೇಟರ್‌ ಸೌಲಭ್ಯಗಳಿರುತ್ತವೆ. 108 ತುರ್ತು ವಾಹನ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಯಾರಾದರೂ ಹಣ ಕೇಳಿದರೆ, ಸೂಕ್ತ ದಾಖಲೆಯೊಂದಿಗೆ ದೂರು ನೀಡಿದರೆ ಕ್ರಮವಹಿಸಲಾಗುವುದು ಎನ್ನುತ್ತಾರೆ ಗದಗ ಜಿಲ್ಲಾ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ನ ಎಕ್ಸಿಕ್ಯುಟಿವ್‌ ಶ್ರೀನಿವಾಸ್‌.

ಗದಗ ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳ ಕಾರಣದಿಂದಾಗಿ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಲಕ್ಷ್ಮೇಶ್ವರ, ಶಿರಹಟ್ಟಿ ಭಾಗದಲ್ಲಿ ಕೇಸ್‌ಗಳು ಬಂದರೆ ಒಬ್ಬರನ್ನು ಅಟೆಂಡ್‌ ಮಾಡುವ ಸಂದರ್ಭದಲ್ಲಿ ಇಬ್ಬರು ಅಥವಾ ಮೂವರು ರೋಗಿಗಳು ಸೇವೆಯಿಂದ ವಂಚಿತರಾಗುತ್ತಾರೆ. ಸಂಚರಿಸಲು ಕಷ್ಟ ಸಾಧ್ಯವಾಗಿರುವ ರಸ್ತೆಗಳಿಂದಾಗಿ ಅಂಬುಲೆನ್ಸ್‌ಗಳು ಕೂಡ ಪದೇ ಪದೇ ದುರಸ್ತಿಗೆ ಹೋಗುತ್ತಿವೆ ಎನ್ನುತ್ತಾರೆ ಅವರು.

ಲಕ್ಷ್ಮೇಶ್ವರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಗು-ಮಗು, ಜನನಿ ಸುರಕ್ಷಾ ವಾಹನ ಮತ್ತು ತುರ್ತು ಸೇವೆಗೆ ಒಂದು 108 ವಾಹನ ಸೇರಿದಂತೆ ಒಟ್ಟು ಮೂರು ಅಂಬುಲೆನ್ಸ್‌ಗಳಿವೆ.

ನಗು-ಮಗು ಮತ್ತು ಜನನಿ ಸುರಕ್ಷಾ ಅಂಬುಲೆನ್ಸ್‌ಗಳು ಸಂಚರಿಸುತ್ತಿವೆ. ಆದರೆ, 108 ತುರ್ತು ವಾಹನದ ಸೇವೆ ವಿವಿಧ ಕಾರಣಗಳಿಂದ ವ್ಯತ್ಯಯಗೊಳ್ಳುತ್ತಲಿದೆ.

ಒಮ್ಮೊಮ್ಮೆ ರೋಗಿಗಳು 108 ವಾಹನ ತೆಗೆದುಕೊಂಡು ಹೋಗಬೇಕಾದರೆ ಕಿ.ಮೀ. ಇಂತಿಷ್ಟು ಹಣ ನೀಡಬೇಕು ಎಂಬ ನಿಯಮ ಇದೆ. ಹೀಗಾಗಿ ಇದರಿಂದ ಬಡ ಜನತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ಉಳಿದಂತೆ ನಗು-ಮಗು ಮತ್ತು ಜನನಿ ಸುರಕ್ಷಾ ವಾಹನಗಳು ಉಚಿತವಾಗಿ ಲಭ್ಯ ಇವೆ. ಲಕ್ಷ್ಮೇಶ್ವರ ಬೆಳೆಯುತ್ತಲೇ ಇದ್ದು ಇನ್ನಷ್ಟು ಅಂಬುಲೆನ್ಸ್‌ಗಳ ಅಗತ್ಯ ಇದೆ ಎಂದು ಲಕ್ಷ್ಮೇಶ್ವರದ ನಿವಾಸಿ ವಕೀಲ ರಿಯಾಜ್ ಗದಗ ಹೇಳುತ್ತಾರೆ.

ಹೆಸರಿಗಷ್ಟೇ 108 ವಾಹನ: ಸೇವೆಗೆ ಅಲಭ್ಯ

ರೋಣ: ತಾಲ್ಲೂಕಿನ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗಬೇಕಿದ್ದ 108 ವಾಹನಗಳು ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಸೇವೆಗೆ ಸಿಗುತ್ತಿವೆ. ಮಿಕ್ಕೆಲ್ಲಾ ದಿವಸ ಬರೀ ಗ್ಯಾರೇಜಿನಲ್ಲಿಯೇ ಉಳಿಯುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೊಸ ತಂತ್ರಜ್ಞಾನದ ನೆಪಕ್ಕೆ ಸಿಕ್ಕು ಬರೀ ರಿಪೇರಿಗೆ ಹೋಗುವ 108 ತುರ್ತುಸೇವಾ ವಾಹನಗಳು ಇದ್ದೂ, ಇಲ್ಲದಂತಾಗಿವೆ. ಬಡವರಿಗೆ ಉಚಿತ ಸೇವೆ ನೀಡಬೇಕಾದ 108 ವಾಹನಗಳು ಇಂಧನಕ್ಕೆಂದು ಸಾವಿರಾರು ರೂಪಾಯಿ ಪಡೆಯುತ್ತಿರುವ ಆರೋಪಗಳು ಕೂಡ ಕೇಳಿ ಬಂದಿವೆ.

ಆಸ್ಪತ್ರೆ ಸುಪರ್ದಿಯಲ್ಲಿರುವ ತುರ್ತು ವಾಹನಗಳಿಗೆ ಸರ್ಕಾರದ ನಿರ್ದೇಶನದಂತೆ ಇಂಧನಕ್ಕೆ ತಗಲುವ ವೆಚ್ಚವನ್ನು ರೋಗಿಗಳಿಂದ ಭರಿಸಿಕೊಳ್ಳುವುದು ಸಹಜ. ಆದರೆ, ಉಚಿತ ಸೇವೆ ನೀಡಬೇಕಾದ 108 ತುರ್ತು ವಾಹನದವರು ಅದೇ ರೂಢಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ 108 ತುರ್ತು ವಾಹನಗಳ ಗುತ್ತಿಗೆ ಪಡೆದ ಕಂಪನಿಯವರು ಅಲ್ಲಿ ಕೆಲಸ ಮಾಡುವ ನರ್ಸ್, ಚಾಲಕ ಇನ್ನಿತರ ಕೆಲಸಗಾರರಿಗೆ ಸರಿಯಾದ ವೇತನ ನೀಡದೇ ಇರುವುದರಿಂದ ಇಂತಹ ನಿರ್ಲಕ್ಷ್ಯ ಹಾಗೂ ರೋಗಿಗಳಿಂದ ಹಣ ವಸೂಲಿ ಕೆಲಸ ನಡೆಯುತ್ತಿವೆ.

‘ಗುತ್ತಿಗೆ ಪಡೆದ ಕಂಪನಿಯವರು 108 ತುರ್ತು ವಾಹನಗಳ ನೌಕರರಿಗೆ ಸರಿಯಾಗಿ ವೇತನ ನೀಡದಿರುವುದರಿಂದ ಆ ವಾಹನಗಳು ವಾರದಲ್ಲಿ ಒಂದೆರಡು ದಿನ ಮಾತ್ರ ಸೇವೆಗೆ ಲಭ್ಯವಾಗುತ್ತಿವೆ. ಅದನ್ನು ಸರಿಪಡಿಸಲು ಕ್ರಮವಹಿಸಬೇಕು. 108 ವಾಹನಗಳ ಸೇವೆ ಸರಿಯಾಗಿ ನಿಭಾಯಿಸದೇ ಇರುವುದರಿಂದ ನಮ್ಮ ಆಸ್ಪತ್ರೆಯಲ್ಲಿನ ಅಂಬುಲೆನ್ಸ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ’ ಎನ್ನುತ್ತಾರೆ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಎಚ್.ಎಲ್.ಗಿರಡ್ಡಿ.

‘ರೋಣ, ಗಜೇಂದ್ರಗಡಕ್ಕೆ ಎರಡು ವಾಹನಗಳಿವೆ. ಅವು ಬಿಎಸ್ 6 ತಂತ್ರಜ್ಞಾನದ ವಾಹನವಾಗಿರುವುದರಿಂದ ಪದೇ ಪದೇ ರಿಪೇರಿಗೆ ಬರುತ್ತಿವೆ. ಅವು ರಿಪೇರಿಗೆ ಬಂದರೆ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಬೇಕು. ಇದರಿಂದ ತೊಂದರೆ ಆಗುತ್ತಿದೆ. ಕೆಲವೇ ದಿನದಲ್ಲಿ 108 ವಾಹನ ರೋಣ ತಾಲ್ಲೂಕಿಗೆ ಬರುತ್ತದೆ’ ಎನ್ನುವರು ಇಒ ಶ್ರೀನಿವಾಸ.

108 ವಾಹನದಲ್ಲಿ ತುರ್ತು ಸೇವೆಗೆ ವೆಂಟಿಲೇಟರ್ ಅಳವಡಿಕೆಯಾಗಿದೆ. ಆದರೆ, ಅದರ ಬಳಕೆಗೆ ಸಿಬ್ಬಂದಿ ಇರುವುದಿಲ್ಲವಾದ್ದರಿಂದ ಅವು ಕೂಡ ಬಳಕೆಗೆ ಇದ್ದೂ, ಇಲ್ಲದಂತಾಗಿವೆ.

ಪದೇ ಪದೇ ಕೆಟ್ಟು ನಿಲ್ಲುವ ಅಂಬುಲೆನ್ಸ್‌

ಗಜೇಂದ್ರಗಡ: ಪಟ್ಟಣದಲ್ಲಿ ಒಂದು 108 ಅಂಬುಲೆನ್ಸ್‌ ಇದ್ದು, ಪದೇಪದೇ ಕೆಟ್ಟು ನಿಲ್ಲುವುದರಿಂದ ಹಲವು ಬಾರಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವುದು ಸಾಮಾನ್ಯವಾಗಿದೆ.

ಅಪಘಾತ ಸಂಭವಿಸಿದಾಗ ಹಾಗೂ ತುರ್ತು ಪರಿಸ್ಥಿತಿಯಲ್ಲಿ 108 ಅಂಬುಲೆನ್ಸ್‌ಗೆ ಕರೆ ಮಾಡಿದಾಗ ಜಿವಿಕೆ ಸಂಸ್ಥೆಯವರು ಸ್ಥಳೀಯ ಅಂಬುಲೆನ್ಸ್‌ನವರಿಗೆ ಕನೆಕ್ಟ್ ಮಾಡುತ್ತಾರೆ. ಆದರೆ ಅದರ ಚಾಲಕರು, ‘ಕ್ಷಮಿಸಿ ಸರ್, ವಾಹನ ದುರಸ್ತಿಯಲ್ಲಿಯಲ್ಲಿದ್ದು, ಬರಲು ಆಗಲ್ಲ’ ಎಂದು ಉತ್ತರಿಸಿ, ಕಾಲ್‌ ಕಟ್‌ ಮಾಡುತ್ತಾರೆ.

ಈಚೆಗೆ ಕೊಪ್ಪಳ ಜಿಲ್ಲೆಯ ಮಾರನಾಳ ಗ್ರಾಮದ ಲಂಬಾಣಿ ಕುಟುಂಬದ 11 ವರ್ಷದ ಮಗುವಿಗೆ ಚಿಕಿತ್ಸೆ ಕೊಡಿಸಲು 108 ಅಂಬುಲೆನ್ಸ್‌ಗೆ ಕರೆ ಮಾಡಿದಾಗ, ‘ಕ್ಷಮಿಸಿ ಸರ್ ವಾಹನ ದುರಸ್ತಿಯಲ್ಲಿದೆ’ ಎಂಬ ಸಿದ್ದ ಉತ್ತರವೇ ಲಭಿಸಿತು. ಗಜೇಂದ್ರಗಡ ಪಟ್ಟಣದ ಸ್ಥಳೀಯ ಯುವಕರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ರವಾನಿಸಲು ನೆರವಾದವರು. ಬಳಿಕ ಅಲ್ಲಿನ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿ ಆಸ್ಪತ್ರೆ ಅಂಬುಲೆನ್ಸ್‌ನಲ್ಲಿಯೇ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ.

‘ಗಜೇಂದ್ರಗಡ ವ್ಯಾಪ್ತಿಯಲ್ಲಿ ಒಂದು 108 ಅಂಬುಲೆನ್ಸ್‌ ಇದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಲು ನಮ್ಮ ಆಸ್ಪತ್ರೆಯಲ್ಲಿ ಒಂದು ಅಂಬುಲೆನ್ಸ್‌ ಇದ್ದು, ಹೆರಿಗೆ ಹಾಗೂ ಇನ್ನಿತರ ತುರ್ತು ಚಿಕಿತ್ಸೆಗೆ ಯಾವುದೇ ಶುಲ್ಕ ಕೇಳುವುದಿಲ್ಲ. ಸಾಮಾನ್ಯ ರೋಗಿಗಳಿಗೆ ಡೀಸೆಲ್‌ಗೆ ಹಣ ಕೇಳುತ್ತಾರೆ. ಉಳಿದಂತೆ ಎಲ್ಲ ಸೌಲಭ್ಯಗಳು ಲಭಿಸುತ್ತವೆ’ ಎಂದು ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಚಿದಾನಂದ ಮುಂಡಾಸದ ಹೇಳಿದರು.

ಅಂಬುಲೆನ್ಸ್‌ ಸೇವೆ ಆರಂಭಿಸಲು ಆಗ್ರಹ

ನರೇಗಲ್:‌ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನಕೂಲವಾಗಲು ಸ್ಥಳೀಯ ಗ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್‌ ಒಂದನ್ನು ನೀಡಬೇಕು ಎನ್ನುವುದು ಸ್ಥಳೀಯರ ಬಹುದಿನದ ಆಗ್ರಹವಾಗಿದೆ.

ನರೇಗಲ್‌ ಹೋಬಳಿಯು ವಿಶಾಲವಾಗಿದ್ದು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಅವಲಂಬಿಸಿದ್ದಾರೆ. ಪಟ್ಟಣದಿಂದ 28 ಕಿ.ಮೀ. ದೂರವಿರುವ ಗದಗ ಜಿಲ್ಲಾ ಆಸ್ಪತ್ರೆ ಹಾಗೂ 18 ಕಿ.ಮೀ. ದೂರವಿರುವ ರೋಣ ಹಾಗೂ 26 ಕಿ.ಮೀ. ದೂರವಿರುವ ಗಜೇಂದ್ರಗಡ ತಾಲ್ಲೂಕು ಆಸ್ಪತ್ರೆಗಳಿಗೆ ಹೋಗಲು ಜನರು ಅಂಬುಲೆನ್ಸ್‌ ಸೇವೆ ಇಲ್ಲದೆ ಪರದಾಡುತ್ತಿದ್ದಾರೆ.

ಅದರಲ್ಲೂ ಅಪಘಾತ, ಬಾಣಂತಿಯರ ಹೆರಿಗೆ ಸಂದರ್ಭದಲ್ಲಿ ಹಾಗೂ ಹೃದಯಾಘಾತ ಸೇರಿದಂತೆ ಇತರೆ ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್‌ಗೆ ಕರೆ ಮಾಡಿದರೆ ಅದು ಇತರೆ ಸ್ಥಳಗಳಿಂದ ನರೇಗಲ್‌ ಪಟ್ಟಣಕ್ಕೆ ಬರುತ್ತದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಆದಕಾರಣ ನರೇಗಲ್‌ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್‌ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ನೆರವು ನೀಡುವ ಅಂಬುಲೆನ್ಸ್

ಮುಂಡರಗಿ: ಸಾರ್ವಜನಿಕ ಅಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಬುಲೆನ್ಸ್, ನಗು-ಮಗು, 108 ಅಂಬುಲೆನ್ಸ್ ಹಾಗೂ ಮತ್ತಿತರ ಜೀವ ರಕ್ಷಕ ವಾಹನಗಳು ಅಪಘಾತ ಹಾಗೂ ಮತ್ತಿತರ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ಷಣೆ ನೀಡುತ್ತಲಿವೆ.

ಪಟ್ಟಣದ ಸಾರ್ವಜನಿಕ ಅಸ್ಪತ್ರೆ ಸೇರಿದಂತೆ ತಾಲ್ಲೂಕಿನ ಹಮ್ಮಿಗಿ ಹಾಗೂ ಡಂಬಳ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು ನಾಲ್ಕು ಅಂಬುಲೆನ್ಸ್ ವಾಹನಗಳು ತುರ್ತು ಸೇವೆ ನೀಡುತ್ತಲಿವೆ. ಹಮ್ಮಿಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವಾಹನವನ್ನು ತಾಲ್ಲೂಕು ಆಸ್ಪತ್ರೆಗೆ ಪಡೆದುಕೊಳ್ಳಲಾಗಿದೆ. ಇದರಿಂದಾಗಿ ಹಮ್ಮಿಗಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತೀವ್ರ ತೊಂದರೆಯಾಗಿದೆ.

ತಾಲ್ಲೂಕು ಅಸ್ಪತ್ರೆಯಿಂದ ಹಮ್ಮಿಗಿ ಗ್ರಾಮವು ಸುಮಾರು 30 ಕಿ.ಮೀ. ದೂರದಲ್ಲಿದ್ದು, ಮುಂಡರಗಿಯಿಂದ ಹಮ್ಮಿಗಿ ಗ್ರಾಮಕ್ಕೆ ಹೋಗಿ ರೋಗಿಯನ್ನು ಕರೆತರಲು ತುಂಬಾ ಸಮಯ ಬೇಕಾಗುತ್ತದೆ. ಇಂತಹ ಸಮಯದಲ್ಲಿ ರೋಗಿಗಳು ಪರದಾಡುವಂತಾಗುತ್ತದೆ.

ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಅಂಬುಲೆನ್ಸ್ ವಾಹನ ಕೆಟ್ಟು ನಿಂತು ಒಂದೂವರೆ ತಿಂಗಳಾಗಿದೆ. ಅದನ್ನು ದುರಸ್ತಿಗೊಳಿಸದೇ ಇರುವುದರಿಂದ ಗ್ರಾಮದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಗ್ರಾಮೀಣ ಭಾಗದ ರಸ್ತೆಗಳು ಭಾಗಶಃ ಹಾಳಾಗಿದ್ದು, ಸಕಾಲದಲ್ಲಿ ವಾಹನ ದೊರಕದಂತಾಗಿದೆ.

ನಾಲ್ಕು ವಾಹನಗಳಲ್ಲಿ ಒಂದು ವಾಹನಕ್ಕೆ ಮಾತ್ರ ವೆಂಟಿಲೇಟರ್ ಜೋಡಿಸಲಾಗಿತ್ತು. ವೆಂಟಿಲೇಟರ್ ನಿರ್ವಹಣೆಯ ಸಿಬ್ಬಂದಿ ಲಭ್ಯವಿಲ್ಲವಾದ್ದರಿಂದ ಅದನ್ನು ಅಸ್ಪತ್ರೆಯ ಬಳಕೆಗೆ ನೀಡಲಾಗಿದೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಎಂ. ಕುಂಬಾರ, ಪ್ರಕಾಶ್‌ ಗುದ್ನೆಪ್ಪನವರ, ನಾಗರಾಜ ಎಸ್‌.ಹಣಗಿ, ಕಾಶೀನಾಥ ಬಿಳಿಮಗ್ಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT