ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ: ಶೇ 100 ಗುರಿ ಸಾಧನೆ

ಆ್ಯಪ್‌ನಲ್ಲಿ ಯಾವ ಬೆಳೆ, ಎಷ್ಟು ಎಕರೆ ಎಂಬ ಮಾಹಿತಿ ಲಭ್ಯ, ಮುಂಗಾರು ಹಂಗಾಮಿನ ಬೆಳೆ ವಿವರ
Last Updated 8 ನವೆಂಬರ್ 2020, 17:06 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷೆಯ ಯೋಜನೆಯಾದ ಮೊಬೈಲ್ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಶೇ 100ರಷ್ಟು ಗುರಿ ಸಾಧನೆ ಮಾಡಲಾಗಿದೆ.

ಮುಂಗಾರು ಹಂಗಾಮಿನ ಬೆಳೆ ವಿವರ ಸಂಪೂರ್ಣ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ 15,22,314 ತಾಕುಗಳ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ ರೈತರು ಸ್ವತಃ 6,43,246 ತಾಕುಗಳ ಬೆಳೆ ಸಮೀಕ್ಷೆ ನಡೆಸಿದ್ದಾರೆ. ಉಳಿದಂತೆ ಖಾಸಗಿ ನಿವಾಸಿಗಳು 8,74,690 ತಾಕುಗಳ ಬೆಳೆ ಸಮೀಕ್ಷೆ ನಡೆಸಿ ಶೇ 100.21ರಷ್ಟು ಗುರಿ ಸಾಧಿಸಲಾಗಿದೆ.

ಜಮೀನಿನ ವಿವರಗಳನ್ನು ರೈತರೇ ದಾಖಲಿಸುವ ಮೂಲಕ ಯಾವುದೇ ತಪ್ಪಾಗದಂತೆ ನಿಗಾ ವಹಿಸುವುದು ಹಾಗೂ ಈ ಹಿಂದೆ ಹಿಸ್ಸಾಗಳಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ತಪ್ಪಿಸುವುದು ಸರ್ಕಾರದ ಉದ್ದೇಶ ವಾಗಿತ್ತು. ಬೆಳೆ ಸಮೀಕ್ಷೆ ಆ್ಯಪ್‌ ಬಳಕೆ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರೈತರಿಗೆ ತರಬೇತಿ ನೀಡಲಾಗಿತ್ತು. ಈ ಆ್ಯಪ್‌ ಮೂಲಕ ಯಾವ ಬೆಳೆ ಬೆಳೆದಿದ್ದಾರೆ ಎಷ್ಟು ಎಕರೆ ಎಷ್ಟು ಕುಂಟೆ ಎಂಬ ಪೂರ್ಣ ಮಾಹಿತಿ ಲಭ್ಯವಾಗಲಿದೆ.

ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹಿಸಿದ ದತ್ತಾಂಶವನ್ನು ಕೃಷಿ, ರೇಷ್ಮೆ, ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಕಾರ್ಯ, ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು, ಸರ್ವೆ ನಂಬರ್‌ ಆಯ್ಕೆ ಮಾಡಲು ಅನುಕೂಲವಾಗಲಿದೆ.

‘ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್‌.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿ, ಎನ್‌.ಡಿ.ಆರ್‌.ಎಫ್‌ ಮತ್ತು ಎಸ್‌.ಟಿ.ಆರ್‌.ಎಫ್‌ನಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಹಾಯಧನ ನೀಡುವ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸಲು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ರವಿ ತಿಳಿಸಿದರು.

‘ಮೊಬೈಲ್ ಇಲ್ಲದ ರೈತರ ಬಳಿಗೆ ಅಧಿಕಾರಿಗಳು ತೆರಳಿ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಬೆಳೆ ಸಮೀಕ್ಷೆ ನಡೆಸಲು ಅ.15 ಕೊನೇ ದಿನವಾಗಿತ್ತು. ಬೆಳೆ ಮಾಹಿತಿ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಮಾಹಿತಿ ನಮೂದಿಸಿದ್ದರೆ, ರೈತರು ಸಲ್ಲಿಸಿದ್ದ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಮಾಹಿತಿ ತಪ್ಪಾಗಿದ್ದರೆ ಅಥವಾ ಅಪೂರ್ಣವಾಗಿದ್ದರೆ ಹಾಗೂ ನಮೂದಿಸಿರುವ ಮಾಹಿತಿ ಸರಿಯಾಗಿರುವ ಬಗ್ಗೆ ಮತ್ತೊಮ್ಮೆ ಅವರಿಂದ ಖಚಿತ ಪಡಿಸಿಕೊಂಡ ನಂತರವೇ ಅಂತಿಮ ಅಂಕಿ– ಅಂಶಗಳ ಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದರು.

***

ಬೆಳೆ ಸಮೀಕ್ಷೆಯು ವಿವಿಧ ಯೋಜನೆಗಳ ಸಹಾಯಧನ, ಪರಿಹಾರ, ಬೆಂಬಲ ಬೆಲೆ, ಬೆಳೆ ಸಾಲ ನೀಡಲು ಅನುಕೂಲ ಆಗಲಿದೆ.
-ಕೆ.ಎಚ್‌. ರವಿ, ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT