ಹಾವೇರಿ: ‘ನಾನು ಟೆಂಡರ್ ದರಕ್ಕೆ ಅನುಗುಣವಾಗಿ ನಿಮ್ಮ ಅಂಗಡಿಯಲ್ಲಿ ಮೆಣಸಿನಕಾಯಿ ಮಾರುವೆ. ನನಗೆ ಟೆಂಡರ್ ಧಾರಣೆ ಒಪ್ಪಿಗೆ ಆಗದಿದ್ದರೆ, ಮರುದಿನದ ಟೆಂಡರ್ಗೆ ಇಟ್ಟು ಮಾರುವೆ. ತಂಟೆ, ತಕರಾರು ಮಾಡಲ್ಲ...’ ಎಂದು ರೈತರು ಕಾಗದದ ಮೇಲೆ ಸಹಿ ಹಾಕಿದರಷ್ಟೇ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ಇನ್ನು ಮುಂದೆ ವ್ಯವಹಾರ ನಡೆಸಬಹುದಾಗಿದೆ.
ದರ ಕುಸಿದಿದೆ ಎಂದು ಆರೋಪಿಸಿ ಮೆಣಸಿನಕಾಯಿ ಬೆಳೆಗಾರರು ಈಚೆಗೆ ಗಲಭೆ ನಡೆಸಿ, ಎಪಿಎಂಸಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯ ಬೆನ್ನಲ್ಲೇ ಬ್ಯಾಡಗಿ ವರ್ತಕರ ಸಂಘ ಇಂಥ ಹೊಸ ನಿಯಮ ರೂಪಿಸಿದೆ.
‘ಟೆಂಡರ್ಗೆ ಇಟ್ಟ ಮಾಲ್ನ್ನು ತೂಕಕ್ಕೆ ಕೊಡುವ ಅಥವಾ ತಿರಸ್ಕರಿಸುವ ಅಧಿಕಾರ ರೈತರಿಗೆ ಇದೆ. ತಿರಸ್ಕೃತ ಲಾಟುಗಳ ವಿವರ ‘ರೆಫ್ಯೂಸ್ ಫಾರ್ಮ್’ನಲ್ಲಿ ಎಲ್ಲ ದಲಾಲರು ಕಡ್ಡಾಯವಾಗಿ ಎಪಿಎಂಸಿಗೆ ವರದಿ ಮಾಡಬೇಕು’ ಎಂದು ವರ್ತಕರ ಸಂಘ ತಿಳಿಸಿದೆ.
‘ದಲಾಲರು ತಮ್ಮ ಅಂಗಡಿಯ ಹಮಾಲರಿಂದ ಮೆಣಸಿನಕಾಯಿ ಚೀಲ ಕಟ್ಟಿಸಬೇಕು. ರೈತರು ಖುಷಿಯಿಂದ ಸ್ವಯಂಪ್ರೇರಿತರಾಗಿ ಕೊಟ್ಟರೆ ಮಾತ್ರ ಪಡಿಗಾಯಿ ಪಡೆಯಬೇಕು’ ಎಂಬ ನಿಯಮವೂ ಜಾರಿಗೊಳಿಸಿದೆ.
‘ಹೆಚ್ಚು ನೀರು ಸಿಂಪಡಿಸಿ ತಂದ ಮೆಣಸಿನಕಾಯಿ ಚೀಲಗಳನ್ನು ದಲಾಲರು ಟೆಂಡರ್ಗೆ ಇಡದೇ, ಅವುಗಳನ್ನು ಸುರಿದು ತುಂಬಿಕೊಡುವಂತೆ ರೈತರಿಗೆ ತಿಳಿಸಬೇಕು. ಒದ್ದೆ ಮೆಣಸಿನಕಾಯಿಯನ್ನು ದಾಸ್ತಾನು ಮಾಡಿದರೆ ಫಂಗಸ್ ಸೃಷ್ಟಿಯಾಗಿ ಹಾಳಾಗುತ್ತದೆ. ಮಾರುಕಟ್ಟೆಗೆ ಸಾಧ್ಯವಾದಷ್ಟೂ ಒಣಪಡಿ ಮೆಣಸಿನಕಾಯಿ ತರಲು ರೈತರಿಗೆ ತಿಳಿವಳಿಕೆ ನೀಡಬೇಕು’ ಎಂದು ವರ್ತಕರ ಸಂಘ ಸೂಚಿಸಿದೆ.
ವಾರದಲ್ಲಿ ಒಂದು ದಿನ (ಪ್ರತಿ ಸೋಮವಾರ) ಮೆಣಸಿನಕಾಯಿ ವಹಿವಾಟು ನಡೆಸುವುದರಿಂದ ಆವಕ ಹೆಚ್ಚಾಗಿ, ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ವಾರದಲ್ಲಿ ಎರಡು ದಿನ (ಸೋಮವಾರ ಮತ್ತು ಗುರುವಾರ) ವಹಿವಾಟು ನಡೆಸಲು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಸೂಚಿಸಿದ್ದಾರೆ. ಇದಕ್ಕೆ ವರ್ತಕರ ಸಂಘ ಸಮ್ಮತಿ ನೀಡಿದೆ.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಅಹಿತಕರ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ರೈತರಿಂದ ಸಹಿ ಪಡೆಯುವ ಹೊಸ ನಿಯಮ ಜಾರಿಗೆ ತಂದಿದ್ದೇವೆ– ಸುರೇಶಗೌಡ್ರ ಪಾಟೀಲ ಅಧ್ಯಕ್ಷ ಬ್ಯಾಡಗಿ ವರ್ತಕರ ಸಂಘ
ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಉಪ ಮಾರುಕಟ್ಟೆಗೆ ₹10 ಕೋಟಿ ವೆಚ್ಚದ ‘ಸರ್ಕಾರಿ ಶೈತ್ಯಾಗಾರ’ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ– ಎಚ್.ವೈ.ಸತೀಶ್ ಕಾರ್ಯದರ್ಶಿ ಬ್ಯಾಡಗಿ ಎಪಿಎಂಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.