ಕಲಬುರ್ಗಿ: ಭೀಮಾ ನದಿ ಪ್ರವಾಹದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಮೇಕೆ ಮರಿಯನ್ನು ರಕ್ಷಿಸಿದಂತೆ ನಕಲಿ ಕಾರ್ಯಾಚರಣೆ ನಡೆಸಿದ ಜೇವರ್ಗಿ ತಾಲ್ಲೂಕಿನ ನೆಲೋಗಿ ಠಾಣೆ ಪಿಎಸ್ಐ ಮಲ್ಲಣ್ಣ ಯಲಗೋಡ ಅವರನ್ನು ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
'ಮೇಕೆ ಮರಿಯನ್ನು ತನ್ನಿ. ಅದನ್ನು ರಕ್ಷಣೆ ಮಾಡಿದಂತೆ ಮಾಡುತ್ತೇನೆ. ಅದನ್ನು ಟಿ.ವಿ. ಪತ್ರಿಕೆಗಳಿಗೆ ಕೊಡೋಣ' ಎಂದು ಗ್ರಾಮಸ್ಥರಿಗೆ ಹೇಳಿದ್ದ ವಿಡಿಯೊ ವೈರಲ್ ಆಗಿತ್ತು. ಇದು ಜಿಲ್ಲಾ ಪೊಲೀಸ್ ಇಲಾಖೆಗೆ ಮುಜುಗರ ಉಂಟು ಮಾಡಿತ್ತು.
ಕೆಲ ತಿಂಗಳ ಹಿಂದೆ ಕೊರೊನಾ ಲಾಕ್ ಡೌನ್ ಸಮಯದಲ್ಲಿಯೂ ನಿಯಮಾವಳಿ ಉಲ್ಲಂಘಿಸಿ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳಿಂದ ಹಾಕಿನ ಅಭಿಷೇಕ ಮಾಡಿಸಿಕೊಂಡಿದ್ದರು. ಆಗಲೂ ಅವರನ್ನು ಅಮಾನತು ಮಾಡಲಾಗಿತ್ತು.
ಕರ್ತವ್ಯದಲ್ಲಿ ಅಶಿಸ್ತು ತೋರಿಸಿದ ಕಾರಣಕ್ಕೆ ಮಲ್ಲಣ್ಣ ಯಲಗೋಡ ಅವರನ್ನು ಅಮಾನತುಗೊಳಿಸಿದ್ದೇನೆ. ಅವರ ಜಾಗಕ್ಕೆ ಜೇವರ್ಗಿ ಠಾಣೆ ಪಿಎಸ್ಐ ಸಂಗಮೇಶ ಅವರನ್ನು ವರ್ಗಾಯಿಸಲಾಗಿದೆ ಎಂದು ಡಾ.ಸಿಮಿ 'ಪ್ರಜಾವಾಣಿ'ಗೆ ತಿಳಿಸಿದರು.