ಕಲಬುರ್ಗಿ: ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ದೇಶದ ಕ್ರೀಡಾಪಟುಗಳನ್ನು ಹುರಿದುಂಬಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎದುರು ಸ್ಥಾಪಿಸಲಾಗಿರುವ ಸೆಲ್ಫಿ ಪಾಯಿಂಟ್ ಅನ್ನು ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರು ಸೋಮವಾರ ಉದ್ಘಾಟಿಸಿದರು.
’ಐ ಚಿಯರ್ ಫಾರ್ ಇಂಡಿಯಾ ಟೋಕಿಯೊ 2020’ ಅಭಿಯಾನದ ಅಂಗವಾಗಿ ಈ ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ.
ಸೋಮವಾರ ಸೆಲ್ಫಿ ಪಾಯಿಂಟ್ ಉದ್ಘಾಟಿಸಿ ಮಾತನಾಡಿದ ಅವರು, ಟೊಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಹೆಚ್ಚಿನ ಪದಕಗಳೊಂದಿಗೆ ಮರಳಲಿ. ದೇಶದ ಕ್ರೀಡಾಪಟುಗಳಿಗೆ ಯಶಸ್ಸು ಸಿಗಲಿ ಎಂದು ಆಶಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್ ಮಾತನಾಡಿ, ದೇಶದ 68 ಪುರುಷ ಮತ್ತು 57 ಮಹಿಳಾ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮೂವರು ಕ್ರೀಡಾಪಟುಗಳು ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಎದುರು, ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೆಲ್ಫಿ ಪಾಯಿಂಟ್ಗಳನ್ನು ಇಡಲಾಗುವುದು. ಆಗಸ್ಟ್ 8ರವರೆಗೆ ಇವು ಅಲ್ಲಿ ಇರಲಿವೆ ಎಂದು ತಿಳಿಸಿದರು.
ಪಾಲಿಕೆ ಕಚೇರಿ ಎದುರು ಸ್ಥಾಪಿಸಲಾಗಿರುವ ಸೆಲ್ಫಿ ಪಾಯಿಂಟ್ ಅನ್ನು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಉದ್ಘಾಟಿಸಿದರು.