ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಅಭಿವೃದ್ಧಿ: ಭೂಸ್ವಾಧೀನ ಕಾರ್ಯಕ್ಕೆ ಪೂರ್ವಭಾವಿ ಸಭೆ

ಮುಖ್ಯಮಂತ್ರಿ ಭೇಟಿಗೆ ಭೂ ಮಾಲೀಕರ ನಿರ್ಧಾರ
Last Updated 27 ಜೂನ್ 2022, 15:30 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ): ಜಿಲ್ಲೆಯ ಅಂಜನಾದ್ರಿ ದೇವಸ್ಥಾನ ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕುರಿತು ಚರ್ಚಿಸಲು ಖುದ್ದು ಮುಖ್ಯಮಂತ್ರಿಯನ್ನೇ ಭೇಟಿಯಾಗಲು ಭೂ ಮಾಲೀಕರು ನಿರ್ಧರಿಸಿದ್ದಾರೆ.

ಭೂಮಿ ನೀಡುವ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಬೇಕಿದೆ. ಮುಖ್ಯಮಂತ್ರಿಯನ್ನೂ ಭೇಟಿಯಾಗಬೇಕಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಭೂ ಮಾಲೀಕರು ಮಾಡಿದ ಮನವಿಗೆ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಒಪ್ಪಿಗೆ ಸೂಚಿಸಿದರು.

ಈ ಕುರಿತು ಚರ್ಚಿಸಲು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಸಭೆ ನಡೆಯಿತು.

ಹಲವಾರು ವರ್ಷಗಳಿಂದ ಬೇಸಾಯದಿಂದಲೇ ಜೀವನ ನಡೆಸುತ್ತ ಬಂದ ಕುಟುಂಬಗಳಿಗೆ ಈಗ ಏಕಾಏಕಿ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ದಿಢೀರನೇ ನೋಟಿಸ್‌ ಕೂಡ ನೀಡಿದೆ. ಆದ್ದರಿಂದ ತಕ್ಷಣವೇ ನಿರ್ಧಾರ ಹೇಳಲು ಆಗುವುದಿಲ್ಲ ಎಂದು ಭೂ ಮಾಲೀಕರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ರಾಜ್ಯ ಸರ್ಕಾರದ ಆದೇಶದಂತೆ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ತಾತ್ಕಾಲಿಕ ನೀಲನಕ್ಷೆ ರಚಿಸಿ, ಭೂಸ್ವಾಧೀನಕ್ಕೆ ಮುಂದಾಗಿದ್ದೇವೆ. ಈ ನಕ್ಷೆಯೇ ಅಂತಿಮವಲ್ಲ. ನಕ್ಷೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತವೆನಿಸಿದ ಭೂಮಿ ಮಾತ್ರ ಸ್ವಾಧೀನ ಮಾಡಿಕೊಳ್ಳಲಾಗುವುದು‘ ಎಂದು ತಿಳಿಸಿದರು.

‘ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಂಪಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತೊಮ್ಮೆ ಸಮೀಕ್ಷೆ ನಡೆಸಿ ಕಾಮಗಾರಿಗಳ ನೀಲನಕ್ಷೆ ನೀಡಿದ ನಂತರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ನಿಯಮದ ಪ್ರಕಾರವೇ ಭೂ ಸ್ವಾಧೀನ ಮಾಡಲಾಗುವುದು‘ ಎಂದು ಹೇಳಿದರು.

ವಾಣಿಜ್ಯ ಸಂಕೀರ್ಣ, ವಸತಿ ಗೃಹ, ಪ್ರವಾಸಿ ಮಂದಿರ, ಯಾತ್ರಿ ನಿವಾಸ ಸೇರಿದಂತೆ ಅನೇಕ ಕೆಲಸಗಳು ನಡೆಯಬೇಕಿದೆ. ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಆದ್ಯತೆ ಮೇಲೆ ಕೆಲಸ ಕೊಡಲಾಗುವುದು. ಜೀವನಾಂಶವನ್ನೂ ಒದಗಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಮಾತನಾಡಿ ‘ತಾತ್ಕಾಲಿಕ ನೀಲನಕ್ಷೆಯ ಪ್ರಕಾರ 55 ಎಕರೆ ಭೂಮಿ ಬೇಕಾಗಿದ್ದು, ರೈತರು ಒಪ್ಪಿದರೆ ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಎಕರೆಗೆ ಅಂದಾಜು ₹42 ಲಕ್ಷ ನೀಡಲು ಅವಕಾಶವಿದೆ‘ ಎಂದರು.

ರಾಜವಂಶಸ್ಥ ಶ್ರೀಕೃಷ್ಣದೇವರಾಯ ಮಾತನಾಡಿ ‘ಆನೆಗೊಂದಿ ಸುತ್ತಮುತ್ತ 20 ದೇವಸ್ಥಾನಗಳಿದ್ದು, ಇಲ್ಲಿನ ನೈಸರ್ಗಿಕ ಸೌಂದರ್ಯ ಹಾಳು ಮಾಡಬಾರದು. ಅಂಜನಾದ್ರಿ ಧಾರ್ಮಿಕ ಪುಣ್ಯಕ್ಷೇತ್ರವೇ ಹೊರತು; ಪ್ರವಾಸಿ ತಾಣವಲ್ಲ. ಮೂಲ ಸೌಂದರ್ಯಕ್ಕೆ ಧಕ್ಕೆಯಾದರೆ ಅದನ್ನು ವಿರೋಧಿಸುತ್ತೇವೆ‘ ಎಂದರು.

ರೈತ ಶ್ರೀನಾಥ, ಪ್ರಶಾಂತ ಸೇರಿದಂತೆ ಕೆಲ ರೈತರು ’ಅಂಜನಾದ್ರಿ ಸಮೀಪದ ಭೂಮಿ ಪಡೆದು ಪರ್ಯಾಯ ಭೂಮಿ ಒದಗಿಸಬೇಕು‘ ಎಂದು ಆಗ್ರಹಿಸಿದರು.

ಎ.ಸಿ ಬಸವಣ್ಣೆಪ್ಪ, ರಾಜವಂಶಸ್ಥೆ ಲಲಿತಾ ರಾಣಿ, ಹರಿಹರ ದೇವರಾಯ, ತಹಶೀಲ್ದಾರ್‌ ಯು.ನಾಗರಾಜ, ಇಒ ಮಹಾಂತಗೌಡ ಪಾಟೀಲ, ಪಿಡಿಒ ಕೃಷ್ಣಪ್ಪ, ಸುದರ್ಶನ್ ವರ್ಮ ಸೇರಿದಂತೆ ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ ಹಾಗೂ ಸಾಣಾಪುರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT