ಕೊಪ್ಪಳ: ಆತ್ಮವಿಶ್ವಾಸದಿಂದ ಕೋವಿಡ್ ಗೆದ್ದ ಶತಾಯುಷಿ ಅಜ್ಜಿ

ಕೊಪ್ಪಳ: ತಾಲ್ಲೂಕಿನ ಕಾತರಕಿ ಗ್ರಾಮದ ಶತಾಯುಷಿ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರಿಗೆ ಕೋವಿಡ್ ಸೋಂಕು ದೃಢವಾಗಿ, ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಅಜ್ಜಿಗೆ ಈಗ 105 ವರ್ಷ. ಆರಂಭದಲ್ಲಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷಿಸಿದಾಗ ಕೋವಿಡ್ ಇರುವುದು ದೃಢಪಟ್ಟಿತು. ನಂತರ ಅವರು ನಗರದಲ್ಲಿ ಇರುವ ಹಿರಿಯ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್ ಐಸೋಲೇಶನ್ ಆಗಿ, ಚಿಕಿತ್ಸೆ ಪಡೆದುಕೊಂಡರು. ಉಳಿದಂತೆ ಯಾವುದೇ ತೊಂದರೆ ಇರಲಿಲ್ಲ. ವಾರದ ಚಿಕಿತ್ಸೆ ಬಳಿಕ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.
'ಕೊರೋನಾವನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ವರದಿ ನೆಗಟಿವ್ ಬಂದಿದೆ' ಎನ್ನುತ್ತಾರೆ ಚಿಕಿತ್ಸೆ ನೀಡಿದ ವೈದ್ಯ ಹಾಗೂ ಮೊಮ್ಮಗ ಡಾ.ಶ್ರೀನಿವಾಸ ಹ್ಯಾಟಿ.
ಈ ನಡುವೆ ಆಹಾರವನ್ನು ತ್ಯಜಿಸಿದ್ದ ಕಮಲಮ್ಮ, 'ನಾನು ಇಷ್ಟು ವರ್ಷ ಬದುಕಿದ್ದು ಸಾಕು. ನನಗೇನು ಕೊಡಬೇಡಿ. ನಾನೇ ಜೀವ ತ್ಯಜಿಸುತ್ತೇನೆ' ಎಂದು ವಾರಗಳ ಕಾಲ ಯಾವುದೇ ಆಹಾರ ಸ್ವೀಕಾರ ಮಾಡಲು ನಿರಾಕರಿಸಿದ್ದರು. ಆದರೂ ಕುಟುಂಬದವರು ಒತ್ತಾಯ ಮಾಡಿ, ಗಂಜಿ ಮತ್ತು ನೀರನ್ನು ನೀಡಿದ್ದಾರೆ.
ಔಷಧಿಯನ್ನು ಅಷ್ಟಕಷ್ಟೇ ನೀಡಲಾಗಿತ್ತು. ಉಳಿದಂತೆ ಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ಇರುವುದರಿಂದ ನಿಗಾ ವಹಿಸಲಾಗಿತ್ತು. ಇದಕ್ಕಾಗಿ ಯಾವುದೇ ವಿಶೇಷ ಚಿಕಿತ್ಸೆ ನೀಡಿಲ್ಲ ಎನ್ನುತ್ತಾರೆ ವೈದ್ಯರು.
'ನನ್ನ ವೃತ್ತಿ ಬದುಕಿನಲ್ಲಿ ಇದು ಸವಾಲು ಎನ್ನುವಂತೆ ಆಗಿತ್ತು. ಆದರೂ ಯಾವುದೇ ಇತರೆ ಕಾಯಿಲೆಗಳು ಇರದೆ ಇರುವುದರಿಂದ ಸಾಮಾನ್ಯ ಚಿಕಿತ್ಸೆ ನೀಡಲಾಗಿದೆ. ಈಗ ಅವರ ವರದಿ ನೆೆಗೆಟಿವ್ ಬಂದಿದೆ. ನಿಜಕ್ಕೂ ಕೋವಿಡ್ಗೆ ಅಂಜುವರು ಅಜ್ಜಿಯಿಂದ ಕಲಿಯಬೇಕಾಗಿದೆ. ಸಾವಿಗೆ ಅಂಜದೆ, ಆತ್ಮವಿಶ್ವಾಸದಿಂದ ಇರುವುದರಿಂದಲೇ ಅವರು ಬದುಕುವುದು ಸಾಧ್ಯವಾಗಿದೆ' ಎನ್ನುತ್ತಾರೆ ಡಾ.ಶ್ರೀನಿವಾಸ ಹ್ಯಾಟಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.