ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪದೇಶದಿಂದ ಪೌರಕಾರ್ಮಿಕರ ಹೊಟ್ಟೆ ತುಂಬದು

ಪೌರಕಾರ್ಮಿಕರ ದಿನಾಚರಣೆ, ಸದಸ್ಯ ವಸಂತ ಮೇಲಿನಮನಿ ಅತೃಪ್ತಿ
Published 27 ಸೆಪ್ಟೆಂಬರ್ 2023, 5:47 IST
Last Updated 27 ಸೆಪ್ಟೆಂಬರ್ 2023, 5:47 IST
ಅಕ್ಷರ ಗಾತ್ರ

ಕುಷ್ಟಗಿ: ವೇದಿಕೆಗಳಲ್ಲಿ ನೀಡುವ ಉಪದೇಶದಿಂದ ಪೌರಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ. ಅವರಿಗೆ ದೊರೆಯಬೇಕಿರುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು  ಪುರಸಭೆ ಸದಸ್ಯ ವಸಂತ ಮೇಲಿನಮನಿ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ಪುರಸಭೆ ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೈನಂದಿನ ಬದುಕನ್ನು ಬದಿಗಿರಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪೌರಕಾರ್ಮಿಕರು ದೇಶದ ಎರಡನೇ ಸೈನಿಕರಾಗಿದ್ದಾರೆ. ಆದರೆ ಇಲ್ಲಿಯ ಅನೇಕ ಪೌರಕಾರ್ಮಿಕ ಕುಟುಂಬಗಳು ಸಂಕಷ್ಟದಲ್ಲಿವೆ. ಅನೇಕರು ಸೂರು ರಹಿತರಾಗಿದ್ದಾರೆ. ಆದರೆ ಅವರಿಗೆ ದೊರೆಯಬೇಕಿರುವ ಕನಿಷ್ಠ ಸೌಲಭ್ಯಗಳನ್ನು ಒದಿಗಿಸುವಲ್ಲಿ ಜಿಲ್ಲಾ ಅಭಿವೃದ್ಧಿ ಕೋಶ ನಿರ್ಲಕ್ಷ್ಯವಹಿಸಿರುವುದು ಜವಾಬ್ದಾರಿಯ ಲಕ್ಷಣವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಕಾರ್ಮಿಕರ ಹಿತ ಕಾಯುವಲ್ಲಿ ಪುರಸಭೆಯ ಎಲ್ಲ ಸದಸ್ಯರು ಸಂಘಟನಾತ್ಮಕ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಸದಸ್ಯೆ ಗೀತಾ ಕೋಳೂರು ಮಾತನಾಡಿ, ಪಟ್ಟಣದ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ನಿತ್ಯ ಮಾಲಿನ್ಯದಲ್ಲಿಯೇ ಕರ್ತವ್ಯ ನಿರ್ವಹಿಸಿ ಜನರ ಆರೋಗ್ಯ ರಕ್ಷಿಸುತ್ತಿರುವ ಪೌರಕಾರ್ಮಿಕರನ್ನು ಸಮಾಜರ ಪ್ರತಿಯೊಬ್ಬರೂ ಗೌರವಿಸಬೇಕು. ವಾರ್ಡ್‌ಗಳಲ್ಲಿ ಕೆಲಸಕ್ಕೆ ಹೋಗುವ ಪೌರಕಾರ್ಮಿಕರಿಗೆ ದಣಿವಾರಿಸಿಕೊಳ್ಳಲು ಜನರು ಕನಿಷ್ಠ ಕುಡಿಯಲು ನೀರು ಕೊಡುವ ಸೌಜನ್ಯವನ್ನೂ ತೋರದಿರುವುದು ಮಾನವೀಯ ಲಕ್ಷಣವಲ್ಲ ಎಂದು ಬೇಸರ ಹೊರಹಾಕಿದರು.

ಸದಸ್ಯ ಮೈನುದ್ದೀನ್‌ ಮುಲ್ಲಾ ಮಾತನಾಡಿ, ಜನಸಂಖ್ಯೆಗೆ ಹೋಲಿಸಿದರೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ, ಇದರಿಂದ ಪಟ್ಟಣದ ಸ್ವಚ್ಛತೆ ಕಾಪಾಡಲು ತೊಂದರೆಯಾಗುತ್ತಿದೆ. ಕಾರ್ಮಿಕರ ಸಂಖ್ಯೆ ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪಟ್ಟಣದ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಸದಸ್ಯರು ಒತ್ತಡ ಹೇರಬೇಕಿದೆ ಎಂದರು.

ಮುಖ್ಯಾಧಿಕಾರಿ ಧರಣೇಂದ್ರಕುಮಾರ ಮಾತನಾಡಿ, ಕಡಿಮೆ ಸಂಖ್ಯೆಯಲ್ಲಿದ್ದರೂ ಇರುವಷ್ಟು ಪೌರಕಾರ್ಮಿಕರು ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಹಾಳಾಗದಂತೆ ಶ್ರಮಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಸಮಸ್ಯೆಗಳಿಗೂ ಪುರಸಭೆ ಸ್ಪಂದಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸದಸ್ಯ ಜಿ.ಕೆ.ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಪುರಸಭೆ ವತಿಯಿಂದ ಸನ್ಮಾನಿಸಲಾಯಿತು. ಸದಸ್ಯರಾದ ಅಂಬಣ್ಣ ಭಜಂತ್ರಿ, ಬಸವರಾಜ ಬುಡಕುಂಟಿ, ವ್ಯವಸ್ಥಾಪಕ ಖತೀಬಸಾಬ್, ಬಸಂತಕುಮಾರ ಇದ್ದರು. ಕಲಾವಿದ ದುರಗಪ್ಪ ಹಿರೇಮನಿ ನಿರೂಪಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಮುಖ್ಯಾಧಿಕಾರಿ ಧರಣೇಂದ್ರಕುಮಾರ ಸೇರಿ ಪೌರಕಾರ್ಮಿಕರು, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಸದಸ್ಯರು ಭಾಗವಹಿಸಿದ್ದರು. 

ಪೌರಕಾರ್ಮಿಕರ ಕಾಯಂ

ಡಿ.ಸಿ ಸ್ಪಷ್ಟನೆ ಕೆಲ ತಾಂತ್ರಿಕ ಕಾರಣಗಳಿಗಾಗಿ ನೇರ ನೇಮಕಾತಿ ಮೂಲಕ ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವ ಪ್ರಕ್ರಿಯೆ ಜಿಲ್ಲಾಡಳಿತದ ಅಂತಿಮ ಹಂತದಲ್ಲಿದ್ದು ಮೀಸಲಾತಿ ವಿಚಾರವಾಗಿ ಸರ್ಕಾರದಿಂದ ಕೆಲ ಸ್ಪಷ್ಟೀಕರಣ ಬರಬೇಕಿರುವುದರಿಂದ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಜಿಲ್ಲಾಧಿಕಾರಿ ನಲೀನ್ ಅತುಲ್ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೀಸಲಾತಿ ಸಂಬಂಧ ವಿಶೇಷ ನೇಮಕಾತಿ ನಿಯಮಗಳಲ್ಲಿ ಎಸ್‌ಸಿ ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಸರ್ಕಾರ ವಿನಾಯಿತಿ ನೀಡಿದೆ. ಗ್ರಾಮೀಣ ಕನ್ನಡ ಮಾಧ್ಯಮ ಇವೂ ಕೂಡ ಸದ್ಯ ನೇಮಕಾತಿ ಮೀಸಲಾತಿ ವ್ಯಾಪ್ತಿಗೆ ಬರುತ್ತಿವೆ. ಆದರೆ ಪೌರಕಾರ್ಮಿಕರಿಗೆ ಈ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ. ಈ ಕುರಿತು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ ಎಂದರು. ಈ ಮೀಸಲಾತಿ ವಿಚಾರ ಸಂಬಂಧಿಸಿದ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ ಎಂದು ಪೌರಾಡಳಿತ ನಿರ್ದೇಶನಾಲಯ ತಿಳಿಸಿದೆ. ಸರ್ಕಾರದ ಸ್ಪಷ್ಟೀಕರಣ ಬಂದ ತಕ್ಷಣ ಸೇವೆ ಕಾಯಂ ಆದೇಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT