ಶ್ರೀರಂಗಟ್ಟಣ: ಇದುವರೆಗೆ ರಾಜ್ಯವನ್ನು ಆಳಿದವರು ಮಡಿವಾಳ, ಕುಂಬಾರ, ಕಮ್ಮಾರ, ಮೀನುಗಾರ, ನಯನ ಕ್ಷತ್ರಿಯ ಸೇರಿದಂತೆ ತಬ್ಬಲಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ದೂರಿದರು.
ಪಟ್ಟಣದಲ್ಲಿ ವೇದಿಕೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ನಾಯಕತ್ವ ಅಭಿಯಾನದಲ್ಲಿ ಅವರು ಮಾತನಾಡಿದರು. ಮಡಿವಾಳರನ್ನ ಎಸ್ಸಿ ಜನಾಂಗಕ್ಕೆ ಸೇರಿಸಬೇಕು ಎಂಬ ಆಗ್ರಹ ಈಡೇರಿಸಿಲ್ಲ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ನಿಗಮ ಮತ್ತು ಮಂಡಳಿಗಳನ್ನು ಸ್ಥಾಪಿಸಿದ್ದರೂ ಸಂಬಂಧಿಸಿದ ನಿಗಮಗಳಿಗೆ ಸಮರ್ಪಕ ಅನುದಾನ ನೀಡಿಲ್ಲ. ರಾಜಕೀಯ, ಓದ್ಯೋಗಿಕ, ಶೈಕ್ಷಣಿಕ ಸ್ಥಾನಮಾನ ಸಿಕ್ಕಿಲ್ಲ. ಹಾಗಾಗಿ ಪ್ರಸಕ್ತ ಚುನಾವಣೆಯಲ್ಲಿ ತಬ್ಬಲಿ ಜನಾಂಗ ಸೂಕ್ತ ರಾಜಕೀಯ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಮಡಿವಾಳ ಸಮುದಾಯದ ಮುಖಂಡ ಬಿ.ಟಿ. ಗುರುರಾಜ್ ಮಾತನಾಡಿ, ಬಿಜೆಪಿ ಸರ್ಕಾರ ಹಿಂದುಳಿದ ಜನರಿಂದ ಮತ ಪಡೆದು ದ್ರೋಹ ಬಗೆದಿದೆ. ಜೆಡಿಎಸ್ ಒಂದು ಜನಾಂಗದ ಪರ ಇದೆ. ಇದನ್ನು ಹಿಂದುಳಿದ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಖಂಡ ಬಿ. ಲಿಂಗಯ್ಯ ಮಾತನಾಡಿ, ಹಿಂದುಳಿದ ವರ್ಗದ ಜನರಿಗೆ ಮೇಲಿಂದ ಮೇಲೆ ಅನ್ಯಾಯ ನಡೆಯುತ್ತಲೇ ಇದೆ. ಒಗ್ಗೂಡದಿದ್ದರೆ ನಮ್ಮ ಮತ್ತು ಮಕ್ಕಳ ಭವಿಷ್ಯ ಅತಂತ್ರವಾಗಲಿದೆ ಎಂದು ಕಳವಳ ವ್ಯಮಕ್ತಪಡಿಸಿದರು.