ಮೈಸೂರು: ವೃದ್ದೆ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರವನ್ನು ದೋಚಿದ್ದ ಕಳ್ಳನಿಗೆ ನಗರದ 2ನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ₹ 5000 ದಂಡದೊಂದಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ನಂಜನಗೂಡು ತಾಲ್ಲೂಕಿನ ತುಂಬುನೇರಳೆ ಗ್ರಾಮದ ಟಿ.ಎಂ.ನಾಗೇಂದ್ರ ಶಿಕ್ಷೆಗೆ ಗುರಿಯಾದ ಆರೋಪಿ.
ಮೈಸೂರು ತಾಲ್ಲೂಕಿನ ಬಂಡಿಪಾಳ್ಯದ ನಿವಾಸಿ ನಂಜಮ್ಮ ಮೇಲೆ ಈತ ಹಲ್ಲೆ ಮಾಡಿದ್ದ ಆರೋಪ ಸಾಬೀತಾಗಿದ್ದರಿಂದ ಈ ಶಿಕ್ಷೆಗೆ ಗುರಿಯಾಗಿದ್ದಾನೆ.
2018ರ ಜ.28ರ ಬೆಳಿಗ್ಗೆ ನಂಜಮ್ಮ ಹಾಲಿನ ಬೂತ್ನ ಬಾಗಿಲು ತೆರೆಯುತ್ತಿದ್ದಾಗ ಹಿಂದಿನಿಂದ ಬಂದ ನಾಗೇಂದ್ರ, ಏಕಾಏಕಿ ಆಯುಧದಿಂದ ಹೊಡೆದು ಕತ್ತಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಹಲ್ಲೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜಮ್ಮ ಅವರನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದರು.
ಮೈಸೂರು ದಕ್ಷಿಣ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಚ್.ಡಿ.ಆನಂದ ಕುಮಾರ್ ವಾದ ಮಂಡಿಸಿದ್ದರು.