ರಾಯಚೂರು: ಲೋಕಸಭಾ ಚುನಾವಣೆಗೆ ಹದಿನೈದು ದಿನಗಳು ಬಾಕಿ ಇವೆ. ಅಭ್ಯರ್ಥಿಗಳಿಗೆ ಗೆಲುವಿನ ಒತ್ತಡ ನಿದ್ದೆಗೆಡುವಂತೆ ಮಾಡಿದರೆ, ಹಗಲಿನಲ್ಲಿ ಉರಿ ಬಿಸಿಲು, ರಾತ್ರಿ ಧಗೆ ಕಾರ್ಯಕರ್ತರ ನಿದ್ದೆಗೆಡೆಸಿದೆ. ಮುಖಂಡರು ಒತ್ತಡ ಹಾಕುತ್ತಿದ್ದರೂ ಕಾರ್ಯಕರ್ತರು ಉರಿ ಬಿಸಿಲಲ್ಲಿ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಬಾಡಿಗೆ ಕಾರ್ಯಕರ್ತರನ್ನು ಕರೆಸಿದರೂ ರಾಜಕೀಯ ಪಕ್ಷಗಳಿಗೆ ನಿರೀಕ್ಷೆ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಪಕ್ಷಗಳಲ್ಲಿನ ಆಂತರಿಕ ಬೇಗುದಿ, ವೈಯಕ್ತಿಕ ಪ್ರತಿಷ್ಠೆಗಳು ಬೇಸಿಗೆ ಧಗೆಯಲ್ಲೇ ಚುನಾವಣಾ ಕಾವು ಹೆಚ್ಚಿಸಿದೆ.
ಕಾರ್ಯಕರ್ತರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ತಣ್ಣೀರು ಹಾಗೂ ಮಜ್ಜಿಗೆ ಕೊಡಿಸುವುದೇ ಮುಖಂಡರಿಗೆ ತಲೆ ನೋವಾಗಿದೆ. ಮತ್ತೆ ಸಂಜೆ 5 ಗಂಟೆಯ ನಂತರವೇ ಪ್ರಚಾರ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆಯಲ್ಲೇ ಪ್ರಚಾರ ಸಭೆಗಳು ನಡೆಯುತ್ತಿವೆ.
ಜಿಲ್ಲೆಯಲ್ಲಿ ಮರಗಳ ಸಂಖ್ಯೆಯೂ ಕಡಿಮೆ ಇದೆ. ಕಾರ್ಯಕರ್ತರು ಹಾಗೂ ಜನರು ಅಲ್ಲಲ್ಲಿ ಕಂಡು ಬರುವ ಬೇವಿನ ಮರಗಳ ಕೆಳಗೆ ಆಶ್ರಯ ಪಡೆಯತೊಡಗಿದ್ದಾರೆ. ಬೆಳಿಗ್ಗೆ 8 ಗಂಟೆ ವೇಳೆಗೆ ಧಗೆ ಆವರಿಸಿಕೊಳ್ಳುತ್ತಿದೆ. ಟವಾಲು, ಟೊಪ್ಪಿಗೆ, ಪೇಟ ಹಾಗೂ ನೀರಿನ ಬಾಟಲಿ ಇಲ್ಲದೆ ಮನೆಗಳಿಂದ ಹೊರಗೆ ಬೀಳುವುದು ಕಷ್ಟವಾಗಿದೆ. ಧಗೆಗೆ ಮೈಮೇಲಿನ ಬಟ್ಟೆಗಳು ಹಾಗೂ ರುಮಾಲುಗಳು ತೊಯ್ದು ತೊಪ್ಪೆಯಾಗುತ್ತಿವೆ. ಮೊದಲ ದಿನ ಪ್ರಚಾರಕ್ಕೆ ಬಂದ ವ್ಯಕ್ತಿಗಳು ಎರಡನೇ ದಿನ ಪ್ರಚಾರಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮಧ್ಯಾಹ್ನದ ಊಟ ಹಾಗೂ ಕೈತುಂಬ ಹಣ ಸಿಕ್ಕರೆ ಮಾತ್ರ ಹೋಗುತ್ತಿದ್ದಾರೆ.
ಅಭ್ಯರ್ಥಿಗಳು ಹಾಗೂ ಮುಖಂಡರು ಬಿಸಿಲಲ್ಲಿ ಪ್ರಚಾರ ಮಾಡಿ ಸುಸ್ತಾಗಿ ಮಧ್ಯಾಹ್ನ ಪರಿಚಯಸ್ಥರ ಫಾರ್ಮ್ಹೌಸ್ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವರು ಇದೇ ಸಮಯ ಬಳಸಿಕೊಂಡು ಗ್ರಾಮದ ಮುಖಂಡರನ್ನು ಕರೆಸಿಕೊಂಡು ಪಕ್ಷದ ಪರ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
‘ಅಪರೂಪಕ್ಕೆ ಮಳೆ ಬರುವ ಹಾಗೂ ಬಿಸಿಲು ಹೆಚ್ಚು ಇರುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಡಿಸೆಂಬರ್ ಅಥವಾ ಜುಲೈನಲ್ಲಿ ಚುನಾವಣೆ ನಡೆಸುವುದು ಒಳ್ಳೆಯದು. ಈ ವರ್ಷ ಬಿಸಿಲು ಹಾಗೂ ಧಗೆ ಜಾಸ್ತಿ ಇದೆ. ಒಂದು ತಾಸು ಬಿಸಿಲಲ್ಲಿ ತಿರುಗಾಡಿದರೆ ತಲೆ ಸುತ್ತು ಬರುತ್ತಿದೆ. ಬಿಸಿಲು ಪ್ರಚಾರಕ್ಕೂ ತೊಡಕು ಉಂಟು ಮಾಡಿದೆ’ ಎಂದು ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಯುವಕ ಶಿವಕುಮಾರ ಹೇಳಿದರು.
ಮಹಿಳೆಯರಂತೂ ಪ್ರಚಾರಕ್ಕೆ ಬರುತ್ತಿಲ್ಲ. ಅಪರೂಪಕ್ಕೆ ಎನ್ನುವಂತೆ ಪ್ರಚಾರದ ತಂಡಗಳಲ್ಲಿ ಒಬ್ಬರೋ, ಇಬ್ಬರೋ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯರು ಆರೋಗ್ಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಯುವಕರೇ ಸಂಜೆ ವೇಳೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಸಿ ಧಗೆ ಅವರನನ್ನೂ ಸುಸ್ತೋ ಸುಸ್ತಾಗಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.