ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿರುಪಸಂದ್ರದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ವೀರಭದ್ರಯ್ಯ ಅವರ ಕುಟುಂಬದವರನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಭಾನುವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು.
ಕನಕಪುರದ ಮುತ್ತುರಾಯನದೊಡ್ಡಿ ಗ್ರಾಮಕ್ಕೆ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಭೇಟಿ ನೀಡಿದ ಖಂಡ್ರೆ, ಕುಟುಂಬದ ಸದಸ್ಯರಿಗೆ ₹15 ಲಕ್ಷದ ಚೆಕ್ ನೀಡಿದರು. ವೀರಭದ್ರಯ್ಯ ಅವರ ಪತ್ನಿಗೆ ಐದು ವರ್ಷಗಳವರೆಗೆ ₹4 ಸಾವಿರ ಜಮಾ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಖಂಡ್ರೆ, ಜಿಲ್ಲೆಯ ಇಬ್ಬರು ರೈತರು ಆನೆ ದಾಳಿಗೆ ಮೃತಪಟ್ಟಿರುವುದು ದುಃಖದ ಸಂಗತಿ.
ಈಗಾಗಲೇ ಎರಡೂ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ₹15 ಲಕ್ಷ ಪರಿಹಾರ ನೀಡಲಾಗಿದೆ.
ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವ ಕುರಿತು, ಶೀಘ್ರ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು
ಚನ್ನಪಟ್ಟಣ ತಾಲ್ಲೂಕಿನ ವಿರುಪಸಂದ್ರದ ಮಾವಿನ ತೋಟದಲ್ಲಿ ಕಾವಲುಗಾರನಾಗಿದ್ದ ವೀರಭದ್ರಯ್ಯ ಶನಿವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು