ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಗುರುವಾರ ನಡೆದ ಬಹಿರಂಗ ಸಭೆ ವರದಿಗೆ ಬಂದಿದ್ದ ಪತ್ರಕರ್ತರಿಬ್ಬರು ಕಿತ್ತಾಡಿಕೊಂಡಿದ್ದಾರೆ.
ಪಿಟಿಐ ವರದಿಗಾರ್ತಿ ಎಲಿಜಬೆತ್ ಕುರಿಯನ್ ಅವರ ಮೇಲೆ ಎಎನ್ಐ ವರದಿಗಾರ ರಾಘವೇಂದ್ರ ರಾವ್ ಅವರು ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸುರೇಶ್ ಅವರ ಪಕ್ಕವೇ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಇಬ್ಬರೂ ದೂರು–ಪ್ರತಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ರ್ಯಾಲಿ ಮತ್ತು ಬಹಿರಂಗ ಸಭೆಯ ವರದಿಗೆ ಅನುಕೂಲವಾಗುವಂತೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದವರಿಗೆ ತೆರೆದ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಸುರೇಶ್ ಅವರು ಭಾಷಣ ಮಾಡುವಾಗ ಮೈಕ್ ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತಳ್ಳಾಟ ಮತ್ತು ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಾಘವೇಂದ್ರ ಅವರು ಎಲಿಜಬೆತ್ ಅವರ ಕೆನ್ನೆಗೆ ಹೊಡೆದಿದ್ದಾರೆ.
ಸ್ಥಳದಲ್ಲಿದ್ದ ವರದಿಗಾರರು ಹಾಗೂ ಕಾಂಗ್ರೆಸ್ ಮುಖಂಡರು, ‘ಹೆಣ್ಣು ಮಗಳ ಮೇಲೆ ಹಲ್ಲೆ ಮಾಡುತ್ತೀಯಾ’ ಎಂದು ರಾಘವೇಂದ್ರ ರಾವ್ ಅವರನ್ನು ತಡೆದು, ಜಗಳ ಬಿಡಿಸಿದ್ದಾರೆ. ಇಬ್ಬರೂ ಪರಸ್ಪರ ದೂರು, ಪ್ರತಿದೂರು ಕೊಟ್ಟಿದ್ದಾರೆ.
‘ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಎಲಿಜಬೆತ್ ಅವರು ದೂರು ಕೊಟ್ಟಿದ್ದಾರೆ. ‘ಕೆಟ್ಟ ಪದಗಳಲ್ಲಿ ನಿಂದಿಸಿದ ಎಲಿಜಬೆತ್ ಅವರು ಕೈಯಲ್ಲಿದ್ದ ಮೈಕ್ನಿಂದ ಮುಖಕ್ಕೆ ಹೊಡೆದಿದ್ದಾರೆ’ ಎಂದು ರಾಘವೇಂದ್ರ ದೂರು ನೀಡಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೊ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿರುವ ರಾಘವೇಂದ್ರ ರಾವ್ ಅವರು, ‘ನನ್ನ ತಾಯಿ ಕುರಿತು ಎಲಿಜಬೆತ್ ಕೆಟ್ಟದಾಗಿ ಬೈದಿದ್ದೇ ಘಟನೆಗೆ ಕಾರಣ’ ಎಂದು ದೂರಿದ್ದಾರೆ.