ಕುದೂರು: ಪಟ್ಟಣದ ಸೋಲೂರು ಮುಖ್ಯ ರಸ್ತೆಯ ನವಗ್ರಾಮದ ಬಳಿ ರಸ್ತೆಯ ಬಳಿ ಬೃಹತ್ ಆಲದ ಮರವೊಂದು ಮಂಗಳವಾರ ಮಧ್ಯಾಹ್ನ ಧರೆಗುರುಳಿತು.
ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ತಲೆಗೆ ಸ್ವಲ್ಪ ಏಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯಾಧಿಕಾರಿ ಅಂಜನ್ ಮೂರ್ತಿ ಆಗಮಿಸಿ, ಜೆಸಿಬಿ ಯಂತ್ರಗಳ ಸಹಾಯದಿಂದ ಮರದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿದರು.
ಮರದ ಬುಡಕ್ಕೆ ಹಸುವಿನ ಸಗಣಿ ನೀರು, ಗಂಜಲವನ್ನು ಹರಿಯಲು ಬಿಟ್ಟಿದರಿಂದ ಮರದ ಬುಡ ಸಡಿಲವಾಗಿ ಉರುಳಿದೆ ಎಂದು ಅರಣ್ಯಾಧಿಕಾರಿ ತಿಳಿಸಿದರು. ರಸ್ತೆಗೆ ಮರ ಬಿದ್ದಿದ್ದರಿಂದ ಕುದೂರು-ಸೋಲೂರು ಮುಖ್ಯ ರಸ್ತೆಯ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು.
ಕುದೂರು ಪಟ್ಟಣದ ಸೋಲೂರು ಮುಖ್ಯ ರಸ್ತೆಯ ನವಗ್ರಾಮದ ಬಳಿ ರಸ್ತೆಗೆ ಅಡ್ಡವಾಗಿ ಬೃಹತ್ ಆಲದ ಮರವೊಂದು ಮಂಗಳವಾರ ಮಧ್ಯಾಹ್ನ ಧರೆಗುರುಳಿತು.