ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಗಾಂಧಿ ಬಜಾರ್‌ನಲ್ಲಿ ವ್ಯಾಪಾರ–ವಹಿವಾಟಿಗೆ ಅವಕಾಶ ಕೊಡಿ: ಗೋಪಿನಾಥ್

ರಾಗಿಗುಡ್ಡದಲ್ಲಿ ಗಲಾಟೆ, ಅತಿರಂಜಿತ ವರದಿ ಸಲ್ಲ: ಮಾಧ್ಯಮಗಳಿಗೆ ಚೇಂಬರ್ ಆಫ್ ಕಾಮರ್ಸ್ ಮನವಿ
Published 2 ಅಕ್ಟೋಬರ್ 2023, 13:07 IST
Last Updated 2 ಅಕ್ಟೋಬರ್ 2023, 13:07 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಗಿಗುಡ್ಡದಲ್ಲಿ ಗಲಾಟೆ ನಡೆದಿದೆ. ಆದರೆ ಇಡೀ ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಜಾರಿ ಮಾಡಲಾಗಿದೆ. ಇದರಿಂದ ವ್ಯಾಪಾರ– ವಹಿವಾಟಿಗೆ ಧಕ್ಕೆಯಾಗಿದೆ. ಪೊಲೀಸರು ಗಾಂಧಿಬಜಾರ್‌ನಲ್ಲಿ ಬಲವಂತವಾಗಿ ಬಂದ್ ಮಾಡಿಸಬಾರದು’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮನವಿ ಮಾಡಿದರು.

ನಗರದಿಂದ 3 ಕಿ.ಮೀ. ದೂರದಲ್ಲಿರುವ ರಾಗಿಗುಡ್ಡದಲ್ಲಿ ಈದ್‌ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸೆಯನ್ನು ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆ ಕೇವಲ ರಾಗಿಗುಡ್ಡಕ್ಕೆ ಸೀಮಿತವಾಗಿದ್ದರೂ ಕೆಲವು ಮಾಧ್ಯಮಗಳಲ್ಲಿ ಅತಿರಂಚಿತವಾಗಿ ತೋರಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಇದರಿಂದ ಶಿವಮೊಗ್ಗಕ್ಕೆ ಬರುವ ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಈ ರೀತಿಯ ಸುದ್ದಿಗಳಿಂದ ಶಿವಮೊಗ್ಗದ ಶಾಂತಿಗೆ ಇನ್ನಷ್ಟು ಹಾನಿ ಆಗಲಿದೆ. ಎಸ್ಪಿ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಸಾರ್ವಜನಿಕರ ಆತಂಕ ದೂರ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

‘144 ಸೆಕ್ಷನ್ ಅನ್ನು ಕೇವಲ ರಾಗಿಗುಡ್ಡಕ್ಕೆ ಮಾತ್ರ ಸೀಮಿತ ಮಾಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಶಿವಮೊಗ್ಗಕ್ಕೆ ಕೆಟ್ಟ ಹೆಸರು ಬಾರದಂತೆ ಎಲ್ಲರೂ ನೋಡಿಕೊಳ್ಳಬೇಕು. ವಾಣಿಜ್ಯೋದ್ಯಮ ಬೆಳೆಸಲು ಅವಕಾಶ ಕೊಡಿ. ಶಿವಮೊಗ್ಗ ಅಭಿವೃದ್ಧಿಗೆ ಮಾರಕವಾಗದಂತೆ ಮಾಧ್ಯಮಗಳು ಸಂಯಮವಹಿಸಬೇಕು‘ ಎಂದು ಅವರು ಕೋರಿದರು.

ನಗರದಲ್ಲಿ ಶಾಂತಿ–ಸುವ್ಯವಸ್ಥೆಗೆ ಎಲ್ಲರೂ ಸಹಕರಿಸುವಂತೆ ಚೇಂಬರ್‌ ಆಫ್‌ ಕಾರ್ಮಸ್‌ ಕಾರ್ಯದರ್ಶಿ ವಸಂತ ಹೋಬಳಿದಾರ್, ಎಂ. ಶ್ರೀಕಾಂತ್, ಧರಣೇಂದ್ರ ದಿನಕರ್, ಎನ್. ರಮೇಶ್ ಮನವಿ ಮಾಡಿದರು.

ವಿಜಯಕುಮಾರ್, ಪ್ರದೀಪ್ ಯಲಿ, ವಾಸುದೇವ್ ಸೇರಿದಂತೆ ವಾಣಿ‌ಜ್ಯ ಕೈಗಾರಿಕಾ ಸಂಘದ ಪ್ರಮುಖರು ಹಾಗೂ ವರ್ತಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT