ಭದ್ರಾವತಿ: ಒಂದು ಮತ್ತು ಎರಡು ಮತದ ಅಂತರದಿಂದ ಜಯಭೇರಿ ಬಾರಿಸಿದವರು ಮರು ಏಣಿಕೆಯಲ್ಲಿ ಮನಸ್ಸಿಲ್ಲದೆ ಭಾಗವಹಿಸಿ ಗೆಲುವು ಕಂಡರೆ, ಮತ್ತೊಂದೆಡೆ ವಕೀಲರೊಬ್ಬರು ಪಂಚಾಯಿತಿ ಪ್ರವೇಶ ಪಡೆದಿದ್ದಾರೆ.
ತಡಸ ಪಂಚಾಯಿತಿ ಹಾತಿಕಟ್ಟೆ ಕ್ಷೇತ್ರದಿಂದ ವಕೀಲರಾದ ನರಸಿಂಹಮೂರ್ತಿ ಪಂಚಾಯಿತಿ ಪ್ರವೇಶಿಸಿದ್ದಾರೆ.
ಕಂಬದಾಳ್ ಹೊಸೂರು ಹಳದಮ್ಮ, ಇದೇ ಪಂಚಾಯಿತಿ ಕಾಳನಕಟ್ಟೆ ಕ್ಷೇತ್ರದಿಂದ ದಯಾನಂದ, ತಡಸ ರಿಜ್ವಾನಾ, ಕಲ್ಲಹಳ್ಳಿ ಸುಭದ್ರಬಾಯಿ, ದೊಡ್ಡೇರಿ ಪಿ. ಹೇಮಾವತಿ ಒಂದು ಮತ್ತು ಎರಡು ಮತಗಳ ಅಂತರದಿಂದ ಅದೃಷ್ಟದ ಗೆಲುವು ಸಾಧಿಸಿದ್ದಾರೆ.
ನಿಂಬೆಗೊಂದಿ ಎಸ್. ನಂದ್ಯಪ್ಪ ಆರು, ಇದೇ ಪಂಚಾಯಿತಿ ಇಂದಿರಾನಾಗರ ಕ್ಷೇತ್ರದಿಂದ ಕೆ. ಭಜನಿನಾಯಕ, 20, ಅತ್ತಿಗುಂದ ಬಿ.ಸರ್ದಾರ್ 15 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ಯರೇಹಳ್ಳಿ ಪಂಚಾಯಿತಿ ಪ್ರವೇಶಿಸಿರುವ ಉಮೇಶ ಹಾಗೂ ಮಾಲತಿ ಶ್ರೀನಿವಾಸ್ ಭಾವ, ನಾದಿನಿ ಸಂಬಂಧದವರು. ಇದೇ ಪಂಚಾಯಿತಿಯಲ್ಲಿ ನಾಲ್ಕನೇ ಬಾರಿ ಸಿ.ಆರ್. ಶಿವರಾಂ ಪ್ರವೇಶ ಪಡೆದಿದ್ದಾರೆ.
ಯರೇಹಳ್ಳಿ ಗ್ರಾಮದಿಂದ ಸ್ಪರ್ಧಿಸಿದ್ದ ಪತಿ, ಪತ್ನಿಯಲ್ಲಿ ಪತ್ನಿ ಸರೋಜಮ್ಮ ಮರಡಿ ಗೆಲುವು ಕಂಡಿದ್ದಾರೆ.
ಅರಬಿಳಚಿ ಪಂಚಾಯಿತಿಗೆ ಅಕ್ಕ ಅನ್ನಪೂರ್ಣ, ತಮ್ಮ ಗುಣಶೇಖರ ಗೆಲುವು ಸಾಧಿಸಿದ್ದು, ಇವರ ತಂದೆ ಅಣ್ಣಾಮಲೈ ಹಾಲಿ ತಾಲ್ಲೂಕು ಪಂಚಾಯಿತಿ ಸದಸ್ಯರು.