ಶಿರಸಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವನ್ನು ಮೀರುವ ಉಪಾಯಗಳನ್ನು ಕುರಿತು ಮಾಡಿದ ಪಾಠವನ್ನು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಕ್ಕಳ ಸಾಲಿನಲ್ಲಿ ಕುಳಿತು ಕೇಳಿದರು.
ಮಕ್ಕಳ ಸಾಲಿನ ಮುಂದಿನ ಬೇಂಚ್ನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಕುಳಿತಿದ್ದರೆ, ಕರಿ ಹಲಗೆಯ ಎದುರು ನಿಂತು ಸಚಿವ ಸುರೇಶಕುಮಾರ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳು ಪ್ರಶ್ನೆಗೆ ಸರಿಯುತ್ತರ ನೀಡಿದ್ದನ್ನು ಶ್ಲಾಘಿಸಿದರು.
‘ಪರೀಕ್ಷೆಗೆ ಇನ್ನು ಕೆಲವೇ ದಿನಗಳಿವೆ. ಈ ದಿನಗಳನ್ನು ತಪಸ್ಸಿನಂತೆ ಕಳೆಯಬೇಕು. ಗೊಂದಲಗಳನ್ನು ನಿವಾರಿಸಿಕೊಂಡು ವಿಷಯಾಧಾರಿತವಾಗಿ ಅಭ್ಯಾಸ ಮಾಡಬೇಕು. ಪರೀಕ್ಷೆ ಮುಗಿಯುವ ತನಕ ಟಿ.ವಿ, ಮೊಬೈಲ್ ಬಳಕೆಯಿಂದ ದೂರವಿದ್ದರೆ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ’ ಎಂದು ಸಚಿವರು ಕಿವಿಮಾತು ಹೇಳಿದರು.
‘ಪರೀಕ್ಷೆಯೆಂದರೆ ಯುದ್ಧವಲ್ಲ. ಅದೊಂದು ಆಟದ ಬಯಲಿದ್ದಂತೆ. ಉತ್ತಮ ಫಲಿತಾಂಶ ಪಡೆಯಲಷ್ಟೇ ಶಿಕ್ಷಣ ಸೀಮಿತವಾಗಿಲ್ಲ. ಗುಣಮಟ್ಟದ ಜ್ಞಾನ ಮಕ್ಕಳಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಹೊಸ ಪ್ರಯೋಗಗಳನ್ನು ಶಾಲಾ ಹಂತದಲ್ಲಿ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.