ಶಿರಸಿ: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಭಾರತಿ ದಂಪತಿಯ ಮೊದಲ ಪುತ್ರಿ ಜಯಲಕ್ಷ್ಮಿ ವಿವಾಹವು ಸಾಗರ ತಾಲ್ಲೂಕಿನ ಮೇಲಿನಮನೆಯ ಶೈಲಜಾ ಮತ್ತು ರಮೇಶ ಅವರ ಪುತ್ರ ಆದಿತ್ಯ ಜೊತೆ ಶನಿವಾರ ರಾತ್ರಿ ಕಾಗೇರಿಯಲ್ಲಿ ನಡೆಯಿತು.
ಕಾಗೇರಿಯಲ್ಲಿರುವ ವಿಶ್ವೇಶ್ವರ ಹೆಗಡೆ ಅವರ ಮೂಲ ಮನೆಯ ಆವರಣದಲ್ಲಿ, ಕಟ್ಟಿದ್ದ ಚಪ್ಪರದಲ್ಲಿ ಮದುವೆ ಸಮಾರಂಭ ನಡೆಯಿತು.
ಸಂಬಂಧಿಕರು, ಆಪ್ತರು, ಸಂಘ ಪರಿವಾರದ ಪ್ರಮುಖರಿಗಷ್ಟೇ ಆಹ್ವಾನವಿತ್ತು. ಸಚಿವರಾದ ಸಿ.ಟಿ.ರವಿ, ಜಗದೀಶ ಶೆಟ್ಟರ್ ಭಾಗವಹಿಸಿದ್ದರು.
ವಿಶೇಷ ಆಡಂಬರವಿರಲಿಲ್ಲ. ಸಾಮಾನ್ಯರ ಮನೆಯ ಕಾರ್ಯಕ್ರಮದಷ್ಟೇ ಸರಳವಾಗಿತ್ತು.
ಡಿ.10ರಂದು ಗೋಳಿ ಸಿದ್ಧಿವಿನಾಯಕ ದೇವಾಲಯದಲ್ಲಿ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.