ಶಿರಸಿ: ತಾಲ್ಲೂಕಿನ ರಾಗಿಹೊಸಳ್ಳಿ ಗ್ರಾಮದಲ್ಲಿ ಅಡಿಕೆ ತೋಟದ ಮರವೊಂದರ ಮೇಲೆ ನಾಲ್ಕು ದಿನಗಳಿಂದ ಕುಳಿತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪವನ ನಾಯ್ಕ ಬುಧವಾರ ಸೆರೆ ಹಿಡಿದರು.
ಹಾವು ಇದ್ದ ಕಾರಣಕ್ಕೆ ತೋಟಕ್ಕೆ ಕೆಲಸಕ್ಕೆ ತೆರಳಲು ಕಾರ್ಮಿಕರು ಭಯಪಡುತ್ತಿದ್ದರು. ರಾಜ್ಯ ಹೆದ್ದಾರಿ ಪಕ್ಕದಲ್ಲೇ ಈ ತೋಟವಿದೆ.
ಹಾವು ಇರುವ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಪವನ್ ಕಾರ್ಯಾಚರಣೆ ನಡೆಸಿದರು. ಸುರಕ್ಷಿತವಾಗಿ ಹಾವು ಸೆರೆಹಿಡಿದರು. ಕಾಳಿಂಗ ಸರ್ಪ 9.2 ಕೆಜಿ ತೂಕವಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೆರೆಹಿಡಿದ ಹಾವನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು ಎಂದು ತಿಳಿಸಿದ್ದಾರೆ.