ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಎರಡನೇ ಅತಿದೊಡ್ಡ ಶಿವ ದೇವಸ್ಥಾನ ಎಂಬ ಖ್ಯಾತಿಯ ಜಂಬುನಾಥ ಗುಡ್ಡದ ಜಂಬುನಾಥೇಶ್ವರ ಸ್ವಾಮಿ ದೇವರ ಭವ್ಯ ರಥೋತ್ಸವ ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದೊಂದಿಗೆ ನೆರವೇರಿದ್ದು, ರಥದ ಚಕ್ರದಡಿಯಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸುಮಾರು 40 ವರ್ಷ ಪ್ರಾಯದ ವ್ಯಕ್ತಿಯ ಹೆಸರು, ಊರು ಗೊತ್ತಾಗಿಲ್ಲ. ಚಕ್ರದಡಿಗೆ ಬಿದ್ದ ವ್ಯಕ್ತಿಯನ್ನು ತಕ್ಷಣ ಆಂಬುಲೆನ್ಸ್ನಲ್ಲಿ ಹೊಸಪೇಟೆ ನಗರದ ಸರ್ಕಾರಿ ಆಸ್ಪತ್ರೆಯತ್ತ ಸಾಗಿಸಲಾಯಿತು. ಆದರೆ ಅವರು ಬದುಕುಳಿಯಲಿಲ್ಲ.
ವರ್ಷಂಪ್ರತಿ ವೈಶಾಖ ಶುದ್ಧ ತ್ರಯೋದಶಿಯಂದು ಈ ರಥೋತ್ಸವ ನಡೆಯುತ್ತದೆ. ರಾಜಾಪುರ ಮತ್ತು ಕಲ್ಲಳ್ಳಿಯ ಸಾವಿರಾರು ಭಕ್ತರ ಸಹಿತ ನಗರದ ವಿವಿಧೆಡೆಗಳಿಂದ ಹಾಗೂ ದೂರದೂರುಗಳಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.