ಹೊಸಪೇಟೆ(ವಿಜಯನಗರ): ಎ.ಜೆ.ಸದಾಶಿವ ಆಯೋಗದ ವರದಿ ವಿರುದ್ಧ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು ಗುರುವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಸದಾಶಿವ ಆಯೋಗದ ವರದಿ ಏಕಪಕ್ಷೀಯವಾಗಿದೆ. ಅದರ ಶಿಫಾರಸು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಕೆಲವು ಸಮುದಾಯಗಳ ಸಾಂವಿಧಾನಿಕ ಮೀಸಲಾತಿ ಹಕ್ಕು ವಂಚಿಸಲು ಕೆಲ ರಾಜಕಾರಣಿಗಳು ಹವಣಿಸುತ್ತಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಎಡ-ಬಲ, ಸ್ಪೃಶ್ಯ-ಅಸ್ಪೃಶ್ಯ ಶಬ್ದಗಳನ್ನು ಬಳಸಿ ಜಾತಿಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಎ.ಜೆ.ಸದಾಶಿವ ಆಯೋಗದ ಕೆಲ ಅಂಕಿ ಅಂಶಗಳು ಬಂಜಾರ, ಭೋವಿ, ಕೊರಮ, ಕೊರಚ, ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳನ್ನು ವರ್ಗೀಕರಿಸಿರುವ ವಿಧಾನ ಮತ್ತು ಬಳಸಿರುವ ಮಾನದಂಡಗಳು, ಈ ಸಮುದಾಯಗಳ ಕುರಿತ ವ್ಯಾಖ್ಯಾನ, ಸ್ಥಿತಿಗತಿಗಳ ದಾಖಲೀಕರಣ ಅಂಶಗಳು ಅಸಾಂವಿಧಾನಿಕವಾಗಿವೆ ಎಂದು ಮನವಿಯಲ್ಲಿ ದೂರಿದರು.
ಮುಖಂಡ ಡಿ.ವೆಂಕಟರಮಣ ಮಾತನಾಡಿ, ‘ಎ.ಜೆ.ಸದಾಶಿವ ಅವರ ತಂಡ ಪರಿಶಿಷ್ಟ ಜಾತಿಯ ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ನೀಡುತ್ತೇವೆ ಎಂದು ಹೇಳಿತ್ತು. ಆದರೆ, ವಾಸ್ತವದಲ್ಲಿ ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಎಡ-ಬಲ ಸ್ಪೃಶ್ಯ-ಅಸ್ಪೃಶ್ಯ ಎಂದು ವಿಂಗಡಿಸಿದೆ. ಅಂಬೇಡ್ಕರ್ ಅವರು ಎಲ್ಲಿಯೂ ಈ ಪದಗಳನ್ನು ಬಳಸಿಲ್ಲ. ಈ ರೀತಿಯಾಗಿ ವರ್ಗೀಕರಿಸಿ ಪರಿಶಿಷ್ಟರನ್ನು ವಿಂಗಡಿಸುವ ಹುನ್ನಾರ ನಡೆದಿದೆ’ ಎಂದು ಟೀಕಿಸಿದರು.
ಒಕ್ಕೂಟದ ಮುಖಂಡರಾದ ವಿ.ತಿಪ್ಪೆಸ್ವಾಮಿ, ರಾಮಜೀ ನಾಯ್ಕ, ಹುಲುಗಪ್ಪ, ಬಸವರಾಜ್, ವಿ.ಮಹೇಶ್, ಚಿದಾನಂದ, ಗಾಳೆಪ್ಪ, ರಾಮಕೃಷ್ಣ, ರಮೇಶ್ ಇದ್ದರು.