ಹೂವಿನಹಡಗಲಿ: ಮಲೆನಾಡು ಹಾಗೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ಒಳ ಹರಿವು ಪ್ರಾರಂಭವಾಗಿದೆ. ಇಲ್ಲಿನ ಸಿಂಗಟಾಲೂರು ಬ್ಯಾರೇಜ್ನಲ್ಲಿ ನೀರು ಸಂಗ್ರಹ ಹೆಚ್ಚುತ್ತಿದ್ದು, ಬುಧವಾರ 1,100 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಕಳೆದ ವರ್ಷ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ತುಂಗಭದ್ರಾ ನದಿ ಬತ್ತಿ ಹೋಗಿತ್ತು. ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರಿನ ಲಭ್ಯತೆ ಇಲ್ಲದೇ ಸ್ಥಗಿತಗೊಂಡಿದ್ದವು. ಸಿಂಗಟಾಲೂರು ಬ್ಯಾರೇಜ್ ಡೆಡ್ ಸ್ಟೋರೇಜ್ ತಲುಪಿತ್ತು. ನೀರಿನ ಸಮಸ್ಯೆ ತೀವ್ರಗೊಳ್ಳುವ ಮುನ್ನ ಮಳೆ ಸುರಿದಿರುವುದು ಜನರಿಗೆ ಕೊಂಚ ಸಮಾಧಾನ ತಂದಿದೆ.
ಕೆಲ ದಿನಗಳಿಂದ ನದಿಯ ಒಳ ಹರಿವು ಹೆಚ್ಚಳವಾಗಿರುವುದರಿಂದ ಸಿಂಗಟಾಲೂರು ಬ್ಯಾರೇಜ್ ನಲ್ಲಿ 1.981 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಬ್ಯಾರೇಜ್ ಎರಡು ಗೇಟ್ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಕೆಲ ದಿನಗಳಿಂದ ನೀರ ಹರಿವು ಸ್ಥಗಿತಗೊಂಡಿದ್ದ ನದಿಯಲ್ಲಿ ಈಗ ಜೀವಕಳೆ ಬಂದಿದೆ.
‘ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ಒಳ ಹರಿವು ಕ್ರಮೇಣ ಹೆಚ್ಚಳವಾಗುತ್ತಿದೆ. ಮೇಲಧಿಕಾರಿಗಳ ನಿರ್ದೇಶನದಂತೆ ಬ್ಯಾರೇಜ್ ಸಮತೋಲನ ಕಾಯ್ದುಕೊಂಡು 1,100 ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿದ್ದೇವೆ’ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ತಿಳಿಸಿದರು.
ಹೂವಿನಹಡಗಲಿ ಸಮೀಪದ ಸಿಂಗಟಾಲೂರು ಬ್ಯಾರೇಜ್ ನಿಂದ ತುಂಗಭದ್ರಾ ನದಿಗೆ ನೀರು ಹರಿಸುತ್ತಿರುವುದು.