ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆಯಾದ ಭೀಮಾ ನದಿ ಪ್ರವಾಹ: ಹೊಲ, ಗದ್ದೆಗಳಲ್ಲಿ ದುರ್ವಾಸನೆ

ಪ್ರವಾಹದಿಂದ ಇಲ್ಲದಂತಾದ ಜಮೀನಿನ ರಸ್ತೆ; ಬೆಂಕಿ ರೋಗ ಬಂದಂತೆ ಭಾಸವಾಗುವ ಬೆಳೆ
Last Updated 22 ಅಕ್ಟೋಬರ್ 2020, 16:40 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಭೀಮಾ ನದಿ ಪ್ರವಾಹ ಇಳಿಕೆಯಾಗಿದೆ. ನದಿ ತೀರದಲ್ಲಿ ಪ್ರವಾಹದ ನೀರು ಕಡಿಮೆಯಾಗಿದೆ. ಆದರೆ, ಹೊಲ–ಗದ್ದೆಗಳಲ್ಲಿ ಪ್ರವಾಹದ ನೀರು ದುರ್ವಾಸನೆ ಬೀರುತ್ತಿದೆ. ನಾಯ್ಕಲ್ ಬೈಪಾಸ್‌ ಹೆದ್ದಾರಿ ರಸ್ತೆ ಅಕ್ಕಪಕ್ಕದಲ್ಲಿ ಸತ್ತ ಮೀನುಗಳ ದುರ್ವಾಸನೆಯಿಂದ ನಿವಾಸಿಗಳುತೊಂದರೆ ಅನುಭವಿಸುತ್ತಿದ್ದಾರೆ.

ವಡಗೇರಾ ತಾಲ್ಲೂಕಿನ ಕುಮನೂರ–ಅರ್ಜುಣಗಿ ರಸ್ತೆಯಲ್ಲಿ ಪ್ರವಾಹದ ನೀರಿನಲ್ಲಿ ಚಿಕ್ಕ ಗಾತ್ರದ ಮೊಸಳೆ ಸತ್ತು ಬಿದ್ದಿದೆ. ಕುಮನೂರ ಗ್ರಾಮದ ತಿಪ್ಪೆಗುಂಡಿಯಲ್ಲಿ ಎರಡು ಸಣ್ಣಗಾತ್ರದ ಮೊಸಳೆಗಳು ಕಂಡುಬಂದಿವೆ.

ವಡಗೇರಾ ತಾಲ್ಲೂಕಿನ ಗೆಡ್ಡೆಸೂಗೂರ ಗ್ರಾಮದಲ್ಲಿ 200 ಮೋಟರ್, ವಿದ್ಯುತ್‌ ಪರಿವರ್ತಕ ಮುಳುಗಿವೆ. ಭತ್ತದ ಗದ್ದೆಗೆ ನೀರು ಹರಿದು ತೆನೆ ಸತ್ತು ಹೋಗಿದೆ. ಹೊಳೆಗೆ ತೆರಳುವ ರಸ್ತೆ ಕೆಸರು ಮಯವಾಗಿದ್ದು, ಪ್ರವಾಹದ ನೀರು ಹೊಲಗಳಲ್ಲಿ ದುರ್ವಾಸನೆ ಬರುತ್ತಿದೆ. ಪ್ರವಾಹ ಇಳಿಕೆಯಾದ ನಂತರ ಹೊಲ, ಗದ್ದೆಗಳಿಗೆ ರಸ್ತೆ ಇಲ್ಲದಂತಾಗಿದೆ.

‘ಭತ್ತ, ಹತ್ತಿ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಭೀಮಾ ನದಿ ಪ್ರವಾಹದಿಂದ ಎಲ್ಲ ಬೆಳೆ ಕೊಚ್ಚಿಕೊಂಡು ಹೋಗಿವೆ. ಬೆಳೆ ಸತ್ತಿದ್ದರಿಂದ ರೈತನೇ ಸತ್ತಂತೆ ಆಗಿದೆ. ಹೊಳೆಯಿಂದ 2 ಕಿ.ಮೀ ದೂರದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ಬೆಳೆಯಲ್ಲಿ ಬೆಂಕಿ ರೋಗದಂತೆ ಕಂಡುಬರುತ್ತಿದೆ. ಇದರಿಂದ ಸಾಲದ ಸುಳಿಯಲ್ಲಿ ಜೀವನ ನಡೆಸಬೇಕಾಗಿದೆ’ ಎನ್ನುತ್ತಾರೆ ಗೆಡ್ಡೆಸೂಗೂರ ಗ್ರಾಮಸ್ಥ ಹಣಮಂತ ತಲವಾರಗೇರಿ.‌

‘ಭತ್ತ, ಹತ್ತಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಮಳೆ ಮತ್ತು ಪ್ರವಾಹದಿಂದಾಗಿ ಸಂಸಾರನೇ ಹಾಳಾಗಿದೆ. ಸಾಲ ಕೊಡುವವರು ಇಲ್ಲದಂತಾಗಿದೆ. ಗೊಬ್ಬರ, ಜಮೀನು ಹಸನು ಮಾಡಲು ಖರ್ಚು ಮಾಡಿದ ಹಣ ಇನ್ನೂ ತೀರಿಸಿಲ್ಲ. ಈಗ ನೋಡಿದರೆ ಪ್ರವಾಹದಿಂದ ಜಮೀನು ಮುಳುಗಡೆಯಾಗಿದೆ. ಮುಂದೇನೂ ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎಂದು ರೈತ ಭೀಮರಾಯ ಬಳಿಚಕ್ರ ಹೇಳುತ್ತಾರೆ.

ಜೋಳ ಬಿತ್ತನೆ ಸಾಧ್ಯವಿಲ್ಲ:ಪ್ರವಾಹದಿಂದ ಹಾನಿಯಾದ ಬೆಳೆಯನ್ನು ಕಿತ್ತಿ ಹಾಕಿ ಜೋಳ ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಈಗಾಗಲೇ ಸಾಲ ಮಾಡಿದ ಬೆಳೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಅಳಿದುಳಿದ ಬೆಳೆಯನ್ನು ಕಿತ್ತು ಹಾಕಿ ಜೋಳ ಬಿತ್ತುವ ಶಕ್ತಿ ರೈತರಿಗಿಲ್ಲ. ಹೀಗಾಗಿ, ಎಷ್ಟು ಸಾಧ್ಯವೋ ಅಷ್ಟು ಸರ್ಕಾರದಿಂದ ಪರಿಹಾರದ ಹಣ ಸಿಗಬೇಕು ಎನ್ನುವುದು ಪ್ರವಾಹ ಪೀಡಿತ ಗ್ರಾಮಗಳ ರೈತರ ಆಗ್ರಹವಾಗಿದೆ.

ಗೊಬ್ಬರದ ಹಣ ಇನ್ನೂ ಮುಟ್ಟಿಲ್ಲ:‘ಹತ್ತಿ, ಭತ್ತಕ್ಕೆ ತಂದ ಗೊಬ್ಬರ ಹಣವನ್ನು ಇನ್ನೂ ಅಂಗಡಿ ಮಾಲೀಕರಿಗೆ ತಲುಪಿಸಿಲ್ಲ. ಬೆಳೆ ಬಂದಾಗ ಕೊಡುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ, ಈಗ ಬೆಳೆಯೂ ಇಲ್ಲ. ಅತ್ತ ಮಾಡಿದ ಸಾಲವೂ ಬೆಳೆಯುತ್ತಿದೆ. ಇದರಿಂದ ರೈತರಿಗೆ ಭೂಕಂಪವಾದಂತೆ ಭಾಸವಾಗುತ್ತಿದೆ’ ಎಂದು ರೈತ ರಾಮರೆಡ್ಡಿ ಗೌಡ ಹೇಳುತ್ತಾರೆ.

ಪ್ರವಾಹದಿಂದ ಮನುಷ್ಯರು ಮಾತ್ರ ಉಳಿದಿದ್ದೇವೆ. ಹೊಲ, ಗದ್ದೆ ಸಂಪೂರ್ಣ ನಾಶವಾಗಿದೆ. ಹೊಲಕ್ಕೆ ಹೋದರೆ ಕಣ್ಣೀರು ಬರುತ್ತದೆ. ಹೊಲ ನೋಡಲು ಮನಸ್ಸು ಆಗುತ್ತಿಲ್ಲ. ಬೆಳೆಗೆ ಬೆಂಕಿ ಹಾಕಿ ಸುಟ್ಟಂತೆ ಆಗಿದೆ. ಸರ್ಕಾರ ಪರಿಹಾರದ ಹಣವಾಗಿ ಬಿಡಿಗಾಸು ಕೊಟ್ಟರೆ ಸಾಲುವುದಿಲ್ಲ. ಹೆಚ್ಚಿನ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT