ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಟ್ಯಾಕ್ಸಿ ಚಾಲಕರಿಗೆ ಇನ್ನೂ ಸಿಗದ ಪರಿಹಾರ

ಸುಧಾರಣೆಗೆ ಇನ್ನೂ 6 ತಿಂಗಳು ಬೇಕು, ನೆರವಿಗೆ ಬಾರದ ₹5,000
Last Updated 19 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ಕಾರಣದಿಂದ ತತ್ತರಿಸಿದ್ದ ಆಟೊಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರ ಧನ ಇನ್ನೂ ಹಲವರಿಗೆ ಸಿಕ್ಕಿಲ್ಲ. ಇದರಿಂದ ಚಾಲಕರು ದುಸ್ಥಿತಿಗೆ ಒಳಗಾಗಿದ್ದು, ಅತ್ತ ಪ್ರಯಾಣಿಕರಿಲ್ಲದೆ ಇತ್ತ ಪರಿಹಾರದ ಹಣವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ನಿಂತಲ್ಲೆ ನಿಲ್ಲಿಸಿದ್ದ ವಾಹನಗಳು ಈಗ ಲಾಕ್‌ಡೌನ್‌ ತೆರವಾದರೂ ಪ್ರಯಾಣಿಕರು ಬಾರದೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಅವಲತ್ತುಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ಕಾರುಗಳನ್ನು ಮಾರಾಟ ಮಾಡದಿದ್ದಾರೆ.

ಮುಖ್ಯಮಂತ್ರಿಯವರು ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5,000 ಪರಿಹಾರ ಧನ ಘೋಷಿಸಿದ್ದರು. ಆದರೆ, ಈ ಹಣ ಇನ್ನೂ ನಮಗೆ ತಲುಪಿಲ್ಲ. ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸುತ್ತಾರೆ ಗಿರಿನಾಡು ಟ್ಯಾಕ್ಸಿ, ಕಾರು ಚಾಲಕರ ಸಂಘದ ಸದಸ್ಯರು.

ಬಾಡಿಗೆ ಕೇಳುತ್ತಿಲ್ಲ: ‘ಕೊರೊನಾ ಕಾರಣದಿಂದ ಪ್ರಯಾಣಿಕರು ನಮ್ಮ ವಾಹನಗಳನ್ನು ಬಾಡಿಗೆ ಪಡೆಯುತ್ತಿಲ್ಲ. ಇದರಿಂದ ಬಾಡಿಗೆಗೆ ತೆರಳಲು ಆಗದೆ ನಿಂತಲ್ಲೆ ನಿಲ್ಲಿಸುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ’ ಎನ್ನುತ್ತಾರೆ ಗಿರಿನಾಡು ಟ್ಯಾಕ್ಸಿ, ಕಾರು ಚಾಲಕರ ಸಂಘದ ಅಧ್ಯಕ್ಷ ಮಲ್ಲನಗೌಡ ಮಾಲಿಪಾಟೀಲ.

ಡೀಸೆಲ್ ದರ ಏರಿಕೆ ಹೊಡೆತ: ಲಾಕ್‌ಡೌನ್‌ ಮುನ್ನ ₹60 ಅಸುಪಾಸಿನಲ್ಲಿದ್ದ ಡೀಸೆಲ್‌ ದರ ಈಗ ₹78 ದಾಟಿದೆ. ಇದರಿಂದ ಚಾಲಕರು ಕಡಿಮೆ ಬಾಡಿಗೆಗೆ ತೆರಳಲು ಹಿಂದೇಟು ಹಾಕುವಂತ ಸ್ಥಿತಿ ಬಂದಿದೆ. ಹೆಚ್ಚು ದರ ಹೇಳಿದರೆ ಗ್ರಾಹಕರು ಇತ್ತ ಮುಖ ಮಾಡುವುದಿಲ್ಲ. ನಮ್ಮದು ಡೋಲಾಯಮಾನ ಪರಿಸ್ಥಿತಿ ಇದೆ ಎನ್ನುತ್ತಾರೆ ಅವರು.

ಸುಧಾರಿಸಿಕೊಳ್ಳಲು6 ತಿಂಗಳು ಬೇಕು: ಇದೇ ಪರಿಸ್ಥಿತಿ ಮುಂದುವರಿದರೆನಾವು ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳು ಬೇಕಾಗಿದೆ. ಆಗ ಮಾತ್ರ ಜನರು ಭಯಬಿಟ್ಟು ಟ್ಯಾಕ್ಸಿ ಉಪಯೋಗಿಸಲು ಮುಂದೆ ಬರಬಹುದು ಎಂದು ಚಾಲಕರು ಹೇಳಿದರು.

ಐಎಂಐ ಕಂತಿನ ಚಿಂತೆ: ಮೂರು ತಿಂಗಳು ಮಾತ್ರಐಎಂಐ ಕಂತಿನ ಚಿಂತೆ ಇರಲಿಲ್ಲ. ಈಗ ಬ್ಯಾಂಕ್‌ಗಳವರು ಕಂತು ಕಟ್ಟದಿದ್ದರೆ ಬಡ್ಡಿ ಹಾಕುತ್ತಿದ್ದಾರೆ. ಇದರಿಂದ ಕಂತಿನ ಹಣ ಹೇಗೆ ಹೊಂದಿಸಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಚಾಲಕ ಸಾಬಯ್ಯ ಗುತ್ತೇದಾರ.

‘ಚಾಲಕರಿಗೆ ಶೇ 10 ರಷ್ಟು ಮಾತ್ರ ಪರಿಹಾರ ಧನ ಬಂದಿದೆ. ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದೇವೆ. ಇನ್ನೂ 90 ರಷ್ಟು ಚಾಲಕರಿಗೆ ಬಂದಿಲ್ಲ. ಇದು ಘೋಷಣೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಸಾರಿಗೆ ಸಚಿವರಿಗೆ, ಕಾರ್ಮಿಕರ ಅಧಿಕಾರಿಗೆನಮ್ಮ ಹೆಸರು, ಮೊಬೈಲ್‌ ಸಂಖ್ಯೆ, ಚಾಲನೆಯಲ್ಲಿ ಅನುಭವ ಇತ್ಯಾದಿ ಮಾಹಿತಿ ಪತ್ರ ಸಲ್ಲಿಸಿದ್ದೇವೆ. ಆದರೂ ಇನ್ನು ಪರಿಹಾರ ಬಂದಿಲ್ಲ’ ಎನ್ನುತ್ತಾರೆಸಂಘದ ಸದಸ್ಯ ಶರಣು ನಾರಾಯಣಪೇಟ.

‘ಪರಿಹಾರದ ಹಣಕ್ಕಾಗಿ ಸೇವಾ ಸಿಂಧು ಯೋಜನೆಯಡಿ1,450 ಚಾಲಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಅವರ ಖಾತೆಗೆ ನೇರವಾಗಿ ಹಣ ಜಮೆ ಆಗಿರುತ್ತದೆ. ಹೀಗಾಗಿ ನಮಗೆ ಮಾಹಿತಿ ಇಲ್ಲ’ ಎನ್ನುತ್ತಾರೆಪ್ರಾದೇಶಿಕ ಸಾರಿಗೆ ಅಧಿಕಾರಿವಸಂತ್‌ ಚವ್ಹಾಣ್.

10ವರ್ಷಗಳಾದರೂ ಜಾಗವೇ ಇಲ್ಲ!

ಟ್ಯಾಕ್ಸಿ ಚಾಲಕರು ನಗರದಚಿತ್ತಾಪುರ ರಸ್ತೆಯ ನಗರಸಭೆ ಸಂಕೀರ್ಣ ಮುಂಭಾಗದಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಆದರೆ, ಮಳಿಗೆ ಮುಂದೆ ನಿಲ್ಲಿಸಲು ಮಾಲಿಕರು ಒಪ್ಪುತ್ತಿಲ್ಲ. ಇದರಿಂದ ರಸ್ತೆ ಬದಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆಎನ್ನುತ್ತಾರೆಗಿರಿನಾಡು ಟ್ಯಾಕ್ಸಿ, ಕಾರು ಚಾಲಕರ ಸಂಘದ ಅಧ್ಯಕ್ಷಮಲ್ಲನಗೌಡ ಮಾಲಿ ಪಾಟೀಲ.

‘ಜಿಲ್ಲೆಯಾಗಿ ಯಾದಗಿರಿ 10 ವರ್ಷ ಕಳೆದರೂ ನಮಗೆ ಒಂದು ನಿಲ್ದಾಣ ಇಲ್ಲ. ಇದರಿಂದ ನಮಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಈ ಹಿಂದೆ ನಗರಸಭೆ ಸಂಕೀರ್ಣದಿಂದ ನಮ್ಮನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮುಂದಾಗಿದ್ದರು. ನಮಗೆ ಜಾಗ ತೋರಿಸಿದರೆ ತೆರಳುತ್ತೇವೆ ಎಂದು ಪಟ್ಟು ಹಿಡಿದಾಗ ಸುಮ್ಮನಾದರು. ಆದರೂ ಇಲ್ಲಿಯವರೆಗೆ ನಮಗೆ ಜಾಗ ತೋರಿಸಿಲ್ಲ. ಇಕ್ಕಟ್ಟಾದ ಸ್ಥಳಗಳಲ್ಲೇ ಕಾರು, ಟ್ಯಾಕ್ಸಿ ನಿಲ್ಲಿಸುತ್ತೇವೆ’ ಎಂದು ಅವರು ತಿಳಿಸುತ್ತಾರೆ.

ನಗರದಲ್ಲಿ ಟ್ಯಾಕ್ಸಿ, ಕಾರುಗಳಿಗೆ ಜಾಗದ ಸಮಸ್ಯೆ ಇಲ್ಲದಿದ್ದರೂ ನಮಗೆ ಇನ್ನೂ ಒಂದು ನಿಲ್ದಾಣವೇ ಇಲ್ಲ. ಹೀಗಾಗಿ ನಾವು ರಸ್ತೆ ಬದಿಯೇ ನಿಲ್ಲಿಸುವ ಪರಿಸ್ಥಿತಿಗೆ ಬಂದಿದ್ದೇವೆ ಎಂದುಮಲ್ಲನಗೌಡ ಹೇಳುತ್ತಾರೆ.

***

ಲಾಕ್‌ಡೌನ್‌ ಪರಿಹಾರ ಇನ್ನೂ ನಮಗೆ ಬಂದಿಲ್ಲ. ನಮ್ಮ ಸಂಘದಲ್ಲಿ 8–10 ಚಾಲಕರು ತಮ್ಮ ಕಾರುಗಳನ್ನು ಮಾರಾಟ ಮಾಡಿದ್ದಾರೆ

-ಮಲ್ಲನಗೌಡ ಮಾಲಿ ಪಾಟೀಲ, ಅಧ್ಯಕ್ಷ, ಗಿರಿನಾಡು ಟ್ಯಾಕ್ಸಿ ಕಾರು ಚಾಲಕರ ಸಂಘ

***

ಸರ್ಕಾರ, ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಿದರೂ ಇನ್ನು ಪರಿಹಾರದ ಹಣ ನಮಗೆ ತಲುಪಿಲ್ಲ. ಪ್ರತಿಭಟನೆಯೊಂದೆ ನಮಗಿರುವ ದಾರಿಯಾಗಿದೆ

-ಸಾಬಯ್ಯ ಗುತ್ತೇದಾರ, ಖಜಾಂಚಿ,ಗಿರಿನಾಡು ಟ್ಯಾಕ್ಸಿ ಕಾರು ಚಾಲಕರ ಸಂಘ

***

ಸೇವಾ ಸಿಂಧು ಯೋಜನೆಯಡಿ ಆಟೊಮತ್ತು ಟ್ಯಾಕ್ಸಿ ಫಲಾನುಭವಿಗಳಲ್ಲಿ ಜಿಲ್ಲೆಯಲ್ಲಿ ಬ್ಯಾಡ್ಜ್ ಹೊಂದಿರುವವರು 3,609 ಇದ್ದಾರೆ

-ವಸಂತ್‌ ಚವ್ಹಾಣ್, ಪ್ರಾದೇಶಿಕ ಸಾರಿಗೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT