ನರ್ಮದಾ: ಗುಜರಾತ್ನ ಭರೂಚ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಸಂಸದ ಮನ್ಸುಖ್ ವಾಸವ ಮತ್ತು ಎಎಪಿ ಶಾಸಕ ಚೈತರ್ ವಾಸವ ಅವರು ಈ ತಿಂಗಳ ಆರಂಭದಲ್ಲಿ ಇಲ್ಲಿನ ದೇದಿಯಾಪಾಡದಲ್ಲಿ ಸಾರ್ವಜನಿಕವಾಗಿ ಮಾತಿನ ಚಕಮಕಿ ನಡೆಸಿದ್ದ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಇಬ್ಬರು ನಾಯಕರು ಮತ್ತು ಅವರ ಬೆಂಬಲಿಗರು ಪರಸ್ಪರ ವಾಗ್ವಾದ ನಡೆಸಿರುವ ದೃಶ್ಯವು ವಿಡಿಯೊದಲ್ಲಿ ದಾಖಲಾಗಿದೆ.
ವಾಗ್ವಾದ ತಾರಕ್ಕ್ಕೇರಿದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಇಬ್ಬರು ಮುಖಂಡರ ಬೆಂಬಲಿಗರು ದೂರು–ಪ್ರತಿದೂರು ನೀಡಿದ್ದಾರೆ ಎಂದು ಉಪ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ್ ಯಾದವ್ ತಿಳಿಸಿದರು.
ಶಾಸಕ ಚೈತರ್ ಅವರು ತಾಲ್ಲೂಕು ಅಭಿವೃದ್ಧಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮನ್ಸುಖ್ ಅವರು ಎಕ್ಸ್ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವುದೇ ಈ ವಾಗ್ವಾದಕ್ಕೆ ಕಾರಣ ಎಂದು ವಿವರಿಸಿದರು.