ಬೆಂಗಳೂರು: ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳ ಮತದಾನ ಶನಿವಾರ ಕೊನೆಗೊಂಡ ಬೆನ್ನಲ್ಲೇ ಪ್ರಕಟಗೊಂಡ ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗೆ ವಿವಿಧ ಪಕ್ಷಗಳ ಮುಖಂಡರು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಾಯಕರು ಈ ಸಮೀಕ್ಷಾ ವರದಿಯನ್ನು ಸ್ವಾಗತಿಸಿದ್ದಾರೆ. ಆದರೆ ಇದು ಸಮರ್ಪಕವಾಗಿಲ್ಲ ಎಂದು ಕಾಂಗ್ರೆಸ್ ಜರಿದಿದೆ.
‘ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ ಬಹುತೇಕ ಎಲ್ಲಾ ಸಂಸ್ಥೆಗಳ ವರದಿಗಳೂ ಈ ಬಾರಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದಿವೆ. ಹೀಗಾಗಿ ಈ ಬಾರಿಯ ಘೋಷವಾಕ್ಯವಾಗಿದ್ದ ‘ಅಬ್ ಕೀ ಬಾರ್ 400 ಪಾರ್’ ನಿಜವಾಗಲಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 10 ವರ್ಷಗಳಲ್ಲಿ ದೇಶವು ನವಭಾರತವಾಗಿ ಹೊರಹೊಮ್ಮಿದೆ. 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದು ದೇಶವನ್ನು ಸುಭದ್ರಗೊಳಿಸಿದ್ದೇವೆ. ಮುಂದೆಯೂ ದೇಶ ಇನ್ನಷ್ಟು ಬಲಿಷ್ಠವಾಗಲಿದೆ’– ತೇಜಸ್ವಿ ಸೂರ್ಯ, ಬಿಜೆಪಿ ಮುಖಂಡ
ಬಿಜೆಪಿ ನೇತೃತ್ವದ ಎನ್ಡಿಎ 400ಕ್ಕೂ ಅಧಿಕ ಸ್ಥಾನಗಳನ್ನು ಈ ಚುನಾವಣೆಯಲ್ಲಿ ಪಡೆಯಲಿದೆ. ಬಿಜೆಪಿಯೊಂದೇ 370ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ನರೇಂದ್ರ ಮೋದಿ ಹಾಗೂ ದೇಶದ ಮೇಲಿನ ಭರವಸೆಗೆ ಸಮನಾದುದು ಯಾವುದೂ ಇಲ್ಲ.– ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ
ಮತಗಳು ನಿಜವಾಗಿಯೂ ಏನು ಹೇಳುತ್ತವೆ ಎಂಬುದನ್ನು ಕಾದು ತಿಳಿಯಲು ನಮಗೆ ಸಂತಸವಿದೆ. ಚುನಾವಣೋತ್ತರ ಸಮೀಕ್ಷೆ ಎಂಬುದು ಅತ್ಯಂತ ಅವೈಜ್ಞಾನಿಕ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ವರ್ಷ, ಇಂಥ ಬಹುತೇಕ ಸಮೀಕ್ಷೆಗಳು ಛತ್ತೀಸಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಫಲಿತಾಂಶವನ್ನು ಗ್ರಹಿಸುವಲ್ಲಿ ವಿಫಲವಾಗಿದ್ದವು.– ಶಶಿ ತರೂರ್, ಕಾಂಗ್ರೆಸ್ ಮುಖಂಡ
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ. ಫಲಿತಾಂಶದ ದಿನ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ತಪ್ಪು ಎಂದು ಸಾಭೀತಾಗಲಿದೆ.– ಸೋಮನಾಥ ಭಾರ್ತಿ, ಎಎಪಿ ಶಾಸಕ
‘ಇಂದು ಪ್ರಕಟವಾದವೆಲ್ಲವೂ ನರೇಂದ್ರ ಮೋದಿ ಅವರ ಚುನಾವಣೋತ್ತರ ಸಮೀಕ್ಷೆ. ಸಾರ್ವಜನಿಕರು ನೀಡಿದ ಮತಗಳಲ್ಲಿ ಇಂಡಿಯಾ ಬಣಕ್ಕೆ 295 ಸೀಟುಗಳು ಸಿಗಲಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ’– ಸುಪ್ರಿಯಾ ಶ್ರೀನೇತ್, ಕಾಂಗ್ರೆಸ್ ವಕ್ತಾರೆ
‘ಜೂನ್ 4ರಂದು ವ್ಯಕ್ತಿಯ ನಿರ್ಗಮನ ನಿಶ್ಚಿತವಾಗಿದ್ದು, ಅವರ ಪ್ರಾಯೋಜಿತ ಎಕ್ಸಿಟ್ ಪೋಲ್ ಇದಾಗಿದೆ. ಇಂಡಿಯಾ ಜನಬಂಧನ್ ಕನಿಷ್ಠ 295 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಚುನಾವಣೋತ್ತರ ಸಮೀಕ್ಷೆ ಎಂಬುದು ಒಂದು ಮಾನಸ್ಸಿನ ಭಾವನೆಗಳ ಮೇಲೆ ಆಡುವ ಆಟಗಳು. ಆದರೆ ನಿಜವಾದ ಫಲಿತಾಂಶ ಬೇರೆಯೇ ಇದೆ’– ಜೈರಾಂ ರಮೇಶ್, ಕಾಂಗ್ರೆಸ್ ಮುಖಂಡ.
The man whose exit is certain on June 4th has had these exit polls orchestrated. The INDIA Janbandhan will definitely get a minimum of 295 seats, which is a clear and decisive majority. The outgoing Prime Minister can remain smug for three days in the meanwhile. These are all…
— Jairam Ramesh (@Jairam_Ramesh) June 1, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.