‘ಗಂಟುಮೂಟೆ’ ಖ್ಯಾತಿಯ ರೂಪಾರಾವ್ ನಿರ್ಮಿಸಿ, ಸಹದೇವ್ ಕೆಲವಡಿ ನಿರ್ದೇಶಿಸಿರುವ ‘ಕೆಂಡ’ ಚಿತ್ರದ `ತಾಜಾ ತಾಜಾ ಸುದ್ದಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಹಾಡನ್ನು ಯೋಗರಾಜ ಭಟ್, ವಿ.ಹರಿಕೃಷ್ಣ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ. ‘ಸದ್ಯದ ಪರಿಸ್ಥಿತಿಯಲ್ಲಿ ಹಾಡು ಇಲ್ಲದೆ ಸಿನಿಮಾ ಬಿಡುಗಡೆ ಮಾಡಿದರೆ ಎರಡು ರೀತಿ ಅಪಾಯ ಎದುರಾಗುತ್ತದೆ. ಒಂದು, ಬೆಳಿಗ್ಗೆ ಸ್ನಾನದ ಮನೆಯಲ್ಲಿ ಇರುವಾಗ ನನ್ನ ಹಾಡನ್ನು ಇಡೀ ಪ್ರಪಂಚ ತಿರುಗಿ ನೋಡುತ್ತದೆ ಎಂಬ ಕನಸು ಕಾಣುವುದು. ಎರಡು, ಹೊರಗೆ ಬಂದಾಗ ನಮ್ಮ ಹಾಡು ಯಾರಿಗೂ ಗೊತ್ತಿಲ್ಲವೆಂಬ ದುಗುಡ. ಇದನ್ನೆಲ್ಲ ದಾಟಿ ರಿತ್ವಿಕ್ಗೆ ಯಶಸ್ಸು ಸಿಗಲಿ’ ಎಂದರು ಯೋಗರಾಜ ಭಟ್.
ಬೆಂಗಳೂರಿನಂಥ ಮಹಾನಗರಿಯಲ್ಲಿ ನಿರಾಸೆಗೊಳಗಾದ ಯುವ ಸಮೂಹದ ಕುರಿತಾದ ಕಥೆ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳು ಚಿತ್ರದಲ್ಲಿದೆ ಎನ್ನುತ್ತಿದೆ ಚಿತ್ರತಂಡ.