ನವದೆಹಲಿ: ಭಾರತ ಮತ್ತು ಚೀನಾ ನಡುವಣ 3,488 ಕಿ.ಮೀ ಉದ್ದದ ಗಡಿಯುದ್ದಕ್ಕೂ ಬಾಕಿ ಉಳಿದಿರುವ ಮೂಲ ಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಎಲ್ಲ ಯೋಜನೆಗಳ ತ್ವರಿತ ಜಾರಿ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತಾಧಿಕಾರ ಸಮಿತಿ ರಚಿಸಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಇಂಧನ ಸಚಿವ ಆರ್.ಕೆ.ಸಿಂಗ್, ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್, ಪರಿಸರ ಸಚಿವ ಭೂಪೇಂದರ್ ಯಾದವ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವ ರಿದ್ದ ಸಭೆ ಈ ತೀರ್ಮಾನ ಕೈಗೊಂಡಿತು.
ಗಡಿಯ ಉತ್ತರದಲ್ಲಿ ಚಾಲ್ತಿಯಲ್ಲಿರುವ ವಿವಿಧ ಮೂಲಸೌಕರ್ಯ ಯೋಜ ನೆಗಳನ್ನು ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ವಾಸ್ತವ ಗಡಿ ರೇಖೆಗೆ ಹೊಂದಿ ಕೊಂಡ ರಸ್ತೆ, ಸುರಂಗ, ಸೇತುವೆ ನಿರ್ಮಾಣ ಯೋಜನೆಗಳ ತ್ವರಿತ ಜಾರಿಗೆ ಗಡಿ ರಸ್ತೆ ಸಂಘಟನೆ ನಿರ್ಧರಿಸಿದ್ದರೂ, ಕೋವಿಡ್ನಿಂದಾಗಿ ಹಿನ್ನಡೆಯಾಗಿತ್ತು.
ಬಿಆರ್ಒ ಕಳೆದ ಐದು ವರ್ಷಗಳಲ್ಲಿ ಗಡಿಯುದ್ದಕ್ಕೂ ಸುಮಾರು 4,000 ಕಿ.ಮೀ ಅಂತರದ ರಸ್ತೆಯನ್ನು ಅಭಿವೃದ್ಧಿ ಪಡಿಸಿದೆ. ಈ ಪೈಕಿ ಲಡಾಖ್ನಲ್ಲಿ 760 ಕಿ.ಮೀ, ಜಮ್ಮು ಮತ್ತು ಕಾಶ್ಮೀರದಲ್ಲಿ 723 ಕಿ.ಮೀ, ಉತ್ತರಾಖಂಡದಲ್ಲಿ 480 ಕಿ.ಮೀ, ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿನ 664 ಕಿ.ಮೀ. ರಸ್ತೆ ಸೇರಿದೆ. ಮುಂದಿನ ಐದು ವರ್ಷಗಳಲ್ಲಿ 13,500 ಕಿ.ಮೀ ಅಂತರದ ಗಡಿಯು ದ್ದಕ್ಕೂ 13 ರಾಜ್ಯಗಳ ವ್ಯಾಪ್ತಿಯಲ್ಲಿ 257 ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ರಕ್ಷಣಾ ಸಚಿವಾಲಯವು ಈಗ ಬಿಆರ್ಒಗೆ ವಹಿಸಿದೆ.
ಹೆಚ್ಚುವರಿಯಾಗಿ, 2022ರ ಅಕ್ಟೋಬರ್ ತಿಂಗಳಲ್ಲಿ ಘೋಷಿಸಿದ್ದ 75 ಯೋಜನೆಗಳು, ಗಡಿ ಪ್ರದೇಶಾಭಿವೃದ್ಧಿ ಅನ್ವಯ 117 ಗಡಿ ಜಿಲ್ಲೆಗಳಲ್ಲಿ ಜಾರಿಗೆ ಉದ್ದೇಶಿಸಿದ್ದ ಯೋಜನೆಗಳ ತ್ವರಿತ ಜಾರಿಗೂ ತೀರ್ಮಾನಿಸಲಾಗಿದೆ.
ಅಮೆರಿಕದ ಗುಪ್ತದಳ ಇತ್ತೀಚೆಗಷ್ಟೇ ಭಾರತ –ಚೀನಾದ ಗಡಿಯಲ್ಲಿ ಸಂಘರ್ಷ ನಡೆಯುವ ಸಾಧ್ಯತೆಗಳಿವೆ ಎಂದು ತನ್ನ ವಾರ್ಷಿಕ ವರದಿಯಲ್ಲಿ ಎಚ್ಚರಿಸಿತ್ತು. ಅದರ ಹಿಂದೆಯೇ ಉನ್ನತಮಟ್ಟದ ಸಭೆ ನಡೆದಿರುವುದು ಗಮನಾರ್ಹ. ಪಾಕಿಸ್ತಾನದ ಜೊತೆಗಿನ ಸೇನಾ ಸಂಘರ್ಷ ವಿಷಯ ಸಭೆಯಲ್ಲಿ ಚರ್ಚೆಗೆ ಎರಡನೇ ಆದ್ಯತೆಯ ವಿಷಯವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.