ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಗಾಳಿ: ತತ್ತರಿಸಲಿದೆ ಭಾರತ; ರಾಜ್ಯದ 5 ಜಿಲ್ಲೆಗೂ ಬಿಸಿಗಾಳಿ ಪ್ರಭಾವ

5 ರಾಜ್ಯಗಳಲ್ಲಿ ‘ಆರೆಂಜ್‌ ಅಲರ್ಟ್‌’ l ರಾಜ್ಯದ 5 ಜಿಲ್ಲೆಗೂ ಬಿಸಿಗಾಳಿ ಪ್ರಭಾವ
Last Updated 29 ಏಪ್ರಿಲ್ 2022, 3:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿಲ ಧಗೆಯಿಂದ ಬೇಯುತ್ತಿರುವಾಗಲೇ ತೀಕ್ಷ್ಣ ಸ್ವರೂಪದ ಬಿಸಿ ಗಾಳಿಗೆ (ಹೀಟ್‌ ವೇವ್‌)ಮುಂದಿನ ಐದು ದಿನಗಳ ಕಾಲ ದೇಶದ ಹಲವು ರಾಜ್ಯಗಳು ತತ್ತರಿಸಲಿವೆ. ಐದು ರಾಜ್ಯಗಳಲ್ಲಿ ‘ಆರೆಂಜ್‌ ಅಲರ್ಟ್’ ಘೋಷಿಸಲಾಗಿದೆ. ಕರ್ನಾಟಕದ ಐದರಿಂದ ಆರು ಜಿಲ್ಲೆಗಳ ಮೇಲೂ ಇದರ ಪರಿಣಾಮ ಬೀರಲಿದೆ.

ನೆರೆಯ ಪಾಕಿಸ್ತಾನದ ಮೂಲಕ ಬಿಸಿ ಗಾಳಿ ಭಾರತವನ್ನು ಪ್ರವೇಶಿಸಿದ್ದು, ದಕ್ಷಿಣ ಭಾರತದ ತೆಲಂಗಾಣದವರೆಗೂಇದರ ಪ್ರಭಾವ ಇರಲಿದೆ. ಈ ಸಂಬಂಧ ಭಾರತೀಯ ಹವಾಮಾನ ಇಲಾಖೆ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಈಗಾಗಲೇ ಬಿಸಿ ಗಾಳಿ ಆರಂಭವಾಗಿದ್ದು, ಮುಂದಿನ 5 ದಿನಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಇದರ ಪ್ರತಾಪ ಜೋರಾಗಲಿದೆ. ಬುಧವಾರ ಹಲವು ರಾಜ್ಯಗಳಲ್ಲಿ ತಾಪಮಾನ 43 ರಿಂದ 45 ಡಿಗ್ರಿ ಸೆಲ್ಸಿಯಸ್‌, ಇನ್ನೂ ಹಲವು ರಾಜ್ಯಗಳಲ್ಲಿ 40 ರಿಂದ 43 ಡಿಗ್ರಿ ಸೆಲ್ಸಿಯಸ್‌ ಇತ್ತು. ಮೇ 1ರ ವೇಳೆಗೆ ಕೆಲವು ಕಡೆಗಳಲ್ಲಿ 46 ರಿಂದ 47 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಬಹುದು.

ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ದಾಟಬಹುದು ಎಂದು ರಾಜ್ಯದ ಹವಾಮಾನ ತಜ್ಞರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಿಸಿ ಗಾಳಿಯು ವಾಯವ್ಯ ಮತ್ತು ಮಧ್ಯ ಭಾರತದಲ್ಲಿ 5 ದಿನಗಳು ಮತ್ತು ಪೂರ್ವ ಭಾರತದಲ್ಲಿ ಮುಂದಿನ 3 ದಿನ ಇರಲಿದೆ. ಆ ಬಳಿಕ ಕ್ರಮೇಣ ತಗ್ಗಲಿದೆ. ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮೇ 2ರವರೆಗೆ ತೀಕ್ಷ್ಣ ಸ್ವರೂಪದ ಬಿಸಿ ಗಾಳಿ ಬೀಸಲಿದೆ. ವಿದರ್ಭ, ಪೂರ್ವ ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್‌, ಹರಿಯಾಣ, ಚಂಡೀಗಡ, ದೆಹಲಿ, ಪೂರ್ವ ರಾಜಸ್ಥಾನ, ಪಶ್ಚಿಮ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್‌, ಒಡಿಶಾ ಒಳನಾಡು, ಛತ್ತೀಸಗಡ, ಪಶ್ಚಿಮ ಬಂಗಾಳದ ಗಂಗಾ ಬಯಲುಪ್ರದೇಶ, ತೆಲಂಗಾಣ, ಗುಜರಾತ್‌ ರಾಜ್ಯಗಳು ಬಿಸಿ ಹವೆಯ ಅಲೆಗೆ ಬಳಲಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT