ಮುಂಬೈ: ತೌತೆ ಚಂಡಮಾರುತದ ಹೊಡೆತದಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ‘ಪಿ305’ ಬಾರ್ಜ್ನಲ್ಲಿದ್ದವರ ಪೈಕಿ 89 ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ನೌಕಾಪಡೆ ಬುಧವಾರ ಹೇಳಿದೆ.
‘ಪಿ305’ ಬಾರ್ಜ್ನಲ್ಲಿದ್ದ 273 ಸಿಬ್ಬಂದಿ ಪೈಕಿ 184 ಜನರನ್ನು ರಕ್ಷಿಸಲಾಗಿದೆ. ಇನ್ನೂ ಎರಡು ಬಾರ್ಜ್ಗಳು ಹಾಗೂ ತೈಲ ಘಟಕದ ಸಿಬ್ಬಂದಿಯೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
‘ಐಎನ್ಎಸ್ ತೇಗ್, ಐಎನ್ಎಸ್ ಬೆಟ್ವಾ, ಐಎನ್ಎಸ್ ಬಿಯಾಸ್ ಹಡಗುಗಳು, ಪಿ8ಐ ವಿಮಾನ ಹಾಗೂ ನೌಕಾಪಡೆಯ ಹೆಲಿಕಾಪ್ಟರ್ಗಳು ಶೋಧ ಹಾಗೂ ರಕ್ಷಣಾ ಕಾರ್ಯವನ್ನು ಮುಂದುವರಿಸಿವೆ’ ಎಂದು ನೌಕಾಪಡೆಯ ವಕ್ತಾರರೊಬ್ಬರು ತಿಳಿಸಿದರು.
‘ಒಎನ್ಜಿಸಿ ಹಾಗೂ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಹಡಗುಗಳು, ಬಾರ್ಜ್ಗಳನ್ನು ಸುರಕ್ಷಿತವಾಗಿ ತೀರಕ್ಕೆ ತರುವ ಕಾರ್ಯದಲ್ಲಿ ತೊಡಗಿವೆ. ಐಎನ್ಎಸ್ ತಲ್ವಾರ್ ಸಹ ಈ ಕಾರ್ಯದಲ್ಲಿ ನೆರವಾಗುತ್ತಿದೆ’ ಎಂದು ಅವರು ಹೇಳಿದರು.
‘ಕಳೆದ ನಾಲ್ಕು ದಶಕಗಳಲ್ಲಿ ನಡೆಸಿದ ವಿವಿಧ ರಕ್ಷಣಾ ಕಾರ್ಯಗಳ ಪೈಕಿ ಈಗ ನಡೆಯುತ್ತಿರುವುದು ಅತ್ಯಂತ ಸವಾಲಿನದ್ದಾಗಿದೆ’ ಎಂದು ನೌಕಾಪಡೆಯ ವೈಸ್ಅಡ್ಮಿರಲ್ ಮುರಳೀಧರ್ ಎಸ್.ಪವಾರ್ ಹೇಳಿದರು.