ನವದೆಹಲಿ: ಹಲವಾರು ರಾಜ್ಯಗಳ ನದಿಗಳಲ್ಲಿ ಹೆಣಗಳು ತೇಲಿ ಬರುತ್ತಿರುವ ವರದಿಗಳಿವೆ. ಇಂಥ ವಾರಸುದಾರರು ಇಲ್ಲದ ಹೆಣಗಳ ಅಂತ್ಯಸಂಸ್ಕಾರವನ್ನು ಅನಿಲ ಆಧಾರಿತ ಚಿತಾಗಾರಗಳಲ್ಲಿ ನೆರವೇರಿಸುವ ಸಂಬಂಧ ನೀತಿಯೊಂದನ್ನು ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಸಲಹೆ ನೀಡಿದೆ.
ಈ ಸಂಬಂಧ ಕೇಂದ್ರ ಸರ್ಕಾರ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಸರ್ಕಾರಗಳಿಗೆ ಎನ್ಜಿಟಿ ನೋಟಿಸ್ ನೀಡಿದೆ.
ಚಂಡೀಗಡ ಮೂಲದ ವಕೀಲ ಎಚ್.ಸಿ.ಅರೋರಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್ಜಿಟಿಯ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಗೋಯೆಲ್ ನೇತೃತ್ವದ ಪ್ರಧಾನಪೀಠ, ಈ ಆದೇಶ ನೀಡಿತು.
ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯದಲ್ಲಿ ನದಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಹೆಣಗಳು ತೇಲಿ ಬಂದ ಬಗ್ಗೆ ವರದಿಗಳಿವೆ. ವ್ಯಕ್ತಿಗಳು ಕೋವಿಡ್ನಿಂದ ಮೃತಪಟ್ಟಿರಬಹುದು ಎಂಬ ಅಂಜಿಕೆಯಿಂದ ಮೃತರ ಸಂಬಂಧಿಗಳೇ ಅವರ ಹೆಣಗಳನ್ನು ನದಿಗಳಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.