ನವದೆಹಲಿ:ಕುಲಾಂತರಿ ಹೈಬ್ರಿಡ್ (ಜಿಎಂ) ಸಾಸಿವೆ ಬಿಡುಗಡೆ ಮಾಡಲು ಯಾರ ಒತ್ತಡಕ್ಕೆ ಸಿಲುಕಿದ್ದೀರಿ? ಈಗ ಉದ್ಭವಿಸಿರುವ ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಇದನ್ನು ವಿಳಂಬಿಸುವುದು ಉತ್ತಮವಲ್ಲವೇ? ಎಂಬುದನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ಕುಲಾಂತರಿ ಹೈಬ್ರಿಡ್ ಸಾಸಿವೆಗೆ ಪರಿಸರಾತ್ಮಕ ಅನುಮತಿ ನೀಡಿರುವುದು ಸರಿಪಡಿಸಲಾಗದ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಲಿದೆಯೇ ಎಂಬುದಕ್ಕೂ ಪ್ರತಿಕ್ರಿಯಿಸಲು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿತು.
‘ಹೆಚ್ಚಿನ ಇಳುವರಿ ಜತೆಗೆ ಹೊಸ ಜಿಎಂ ಸಾಸಿವೆ ಕೃಷಿ ರೈತರ ಆದಾಯ ಹೆಚ್ಚಿಸುತ್ತದೆ. ವಿದೇಶಿ ಅವಲಂಬನೆ ತಗ್ಗಿಸುತ್ತದೆ. ಇದರಲ್ಲಿ ರಾಷ್ಟ್ರದ ಮತ್ತು ಸಾರ್ವಜನಿಕ ಹಿತಾಸಕ್ತಿ ಇತ್ತು’ ಎಂದು ಎ.ಜಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.
‘ಜಿಎಂ ಸಾಸಿವೆ ಬೆಳೆಯದಿದ್ದರೆ ನಾವು ಅವನತಿ ಹೊಂದುತ್ತೀವಿ ಎನ್ನುತ್ತೀರಾ? ನಮ್ಮ ದೇಶದ ರೈತರು ಪಾಶ್ಚಿಮಾತ್ಯ ರೈತರಂತೆ ಅಲ್ಲ. ದೇಶದ ವಾಸ್ತವತೆ ಅರ್ಥಮಾಡಿಕೊಳ್ಳಿ.ಬಹಳಷ್ಟು ಕೃಷಿ ಮೇಳಗಳಲ್ಲಿ ಇದು ಇರಬಹುದು, ಆದರೆ ವಾಸ್ತವ ಸ್ಥಿತಿ ಬೇರೇನೆ ಇದೆ’ ಎಂದು ಪೀಠ ತರಾಟೆ ತೆಗೆದುಕೊಂಡಿತು.
‘ಜೀನ್ ಕ್ಯಾಂಪೇನ್’ ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತುಅರುಣಾ ರಾಡ್ರಿಗಸ್ ನೇತೃತ್ವದಲ್ಲಿ ಇತರರು ಜಿಎಂ ಸಾಸಿವೆ ನಿಷೇಧಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.