ರಾಮನಗರ: ‘ಹೇಳಿ ದಾಳಿ ಮಾಡಿಸುವುದಕ್ಕೆ ಕೇಂದ್ರ ಸರ್ಕಾರ, ಇ.ಡಿ. ಮತ್ತು ಆದಾಯ ತೆರಿಗೆ ಇಲಾಖೆಯು ನನ್ನ ಕೈಯಲ್ಲಿದೆಯಾ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
‘ನನ್ನ ಮನೆ ಮೇಲಿನ ದಾಳಿಗೆ ಜೆಡಿಎಸ್ ನಾಯಕರೇ ಕಾರಣ’ ಎಂಬ ಶಾಸಕ ಜಮೀರ್ ಅಹಮ್ಮದ್ ಆರೋಪಕ್ಕೆ ಸೋಮವಾರ ಬಿಡದಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ‘ಅವರ ಆರೋಪಗಳ ಬಗ್ಗೆ ಚರ್ಚೆ ಅನವಶ್ಯಕ. ನನಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಬಹಳ ಜನರಿಗೆ ನನ್ನ ಮೇಲೆಯೇ ಕಣ್ಣು' ಎಂದರು.
‘ ನಾನು ಮುಖ್ಯಮಂತ್ರಿ ಆದರೂ ಉಳಿದವರಂತೆ ದೊಡ್ಡ ಕೈಗಾರಿಕೆ, ಶಿಕ್ಷಣ ಸಂಸ್ಥೆಗಳನ್ನು ತೆರೆದಿಲ್ಲ. ಬಿಡದಿಯಲ್ಲಿ ಕೃಷಿ ಮಾಡಿಕೊಂಡು ಇದ್ದೇನೆ. ಜೊತೆಗೆ ಪಕ್ಷ ಸಂಘಟನೆಗೆ ಏನು ಬೇಕೋ ಅದನ್ನಷ್ಟೇ ಮಾಡಿಕೊಂಡು ಹೋಗುತ್ತಿದ್ದೇನೆ’ ಎಂದರು.