ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ ಇದ್ದರೆ ಕೇಂದ್ರದ ಎದುರು ಧರಣಿ ಮಾಡಿ: ಸಂಸದರಿಗೆ ಡಿ.ಕೆ. ಶಿವಕುಮಾರ್ ಸವಾಲು

Last Updated 15 ಆಗಸ್ಟ್ 2021, 14:38 IST
ಅಕ್ಷರ ಗಾತ್ರ

ರಾಮನಗರ: ‘ಮೇಕೆದಾಟು ವಿಚಾರದಲ್ಲಿ ಸಚಿವರು ಕೇವಲ ಪ್ರಚಾರಕ್ಕೆ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಸಂಸದರು, ಸಚಿವರಿಗೆ ಧೈರ್ಯ ಇದ್ದರೆ ಪ್ರಧಾನಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ತಮ್ಮ ಹಕ್ಕು ಮಂಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಕನಕಪುರದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಮಾತನಾಡಿದರೆ ಎಲ್ಲಿ ನಮ್ಮ ಸ್ಥಾನ, ಅಧಿಕಾರ ಹೋಗುತ್ತದೆ ಎಂದು ರಾಜ್ಯದ ಸಂಸದರು ಹಾಗೂ ಸಚಿವರು ಮೋದಿ ಎದುರು ಮಾತನಾಡಲು ಹೆದರುತ್ತಿದ್ದಾರೆ. ಬೊಮ್ಮಾಯಿ, ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಮೊದಲಾದವರ ಉಸಿರು ನಿಂತು ಹೋಗಿದೆ. ಹೀಗಾಗಿಯೇ ಮೇಕೆದಾಟು, ಮಹದಾಯಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ’ ಎಂದು ಟೀಕಿಸಿದರು.

‘ಮೇಕೆದಾಟು ಅಣೆಕಟ್ಟೆಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶ ಮುಳುಗಡೆ ಆಗಲಿದೆ. ಕನಕಪುರ ತಾಲ್ಲೂಕಿಗೆ ಕೃಷಿಗೆ ಒಂದು ಹನಿ ನೀರು ಸಿಗುವುದಿಲ್ಲ. ಹೀಗಿದ್ದೂ ನಾವು ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಅಣೆಕಟ್ಟೆಯಿಂದ ಉತ್ಪಾದನೆ ಆಗುವ ವಿದ್ಯುತ್‌ ಅನ್ನು ತಮಿಳುನಾಡು ಸರ್ಕಾರವೇ ಖರೀದಿ ಮಾಡಲಿ. ರಾಜ್ಯದ 25 ಬಿಜೆಪಿ ಸಂಸದರು ಧರಣಿ ಮಾಡಿ ಯೋಜನೆಗೆ ಚಾಲನೆ ಕೊಡಿಸಬೇಕು’ ಎಂದರು.

ಹೇಳಿಕೆಗೆ ವಿರೋಧ: ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮ ಪರವಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಇದೊಂದು ಮಾತು ಸಾಕು, ತಮಿಳುನಾಡು ಸರ್ಕಾರದವರು ಇದನ್ನೇ ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸುತ್ತಾರೆ. ಸಚಿವರು ಜವಾಬ್ದಾರಿಯಿಂದ ಹೇಳಿಕೆ ಕೊಡಬೇಕು ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ‘ಅವರು ಯಾವುದೇ ನಶೆಯಲ್ಲಿ ಇದ್ದಾರೆ. ಆ ಬಗ್ಗೆ ಮಾತು ಬೇಡ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT