ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪಿಸಿಎಂಬಿ ಕನ್ನಡ ಮಾಧ್ಯಮದ ಪುಸ್ತಕ ಲಭ್ಯ: ಸಚಿವ ಎಸ್. ಸುರೇಶ್ ಕುಮಾರ್

Last Updated 20 ಆಗಸ್ಟ್ 2020, 12:03 IST
ಅಕ್ಷರ ಗಾತ್ರ

ಬೆಂಗಳೂರು: ‘ಪದವಿ ಪೂರ್ವ ಶಿಕ್ಷಣದ ವಿಜ್ಞಾನ ವಿಭಾಗದಲ್ಲಿ ಸಿಬಿಎಸ್‍ಇ ಪಠ್ಯಕ್ರಮದ ಪಿಸಿಎಂಬಿ ಪುಸ್ತಕಗಳು ಇಂಗ್ಲಿಷ್‍ನಲ್ಲಿ ಇದ್ದುದರಿಂದ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿ ಆಗುವ ತೊಂದರೆ ನೀಗಿಸಲು ಅನುಕೂಲವಾಗುವಂತೆ ಎನ್‌ಇಎಸ್‌ಆರ್‌ಟಿಸಿ ಪುಸ್ತಕಗಳನ್ನು ಇದೇ ಮೊದಲ ಬಾರಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದರು.

ಪಿಯು ಇಲಾಖೆಯ ಸಭಾಂಗಣದಲ್ಲಿ ಗುರುವಾರ ಪಿಯುಸಿಯ ಎನ್‍ಇಎಸ್‍ಆರ್‌ಟಿಸಿಯ ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ತರಗತಿಯ ಪಿಸಿಎಂಬಿ ಪಠ್ಯಗಳ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಲಾಗಿದ್ದು, ಇಲಾಖೆಯಲ್ಲಿ ಇದೊಂದು ಅತ್ಯಂತ ಪ್ರಮುಖ ಪ್ರಯತ್ನವಾಗಿದೆ’ ಎಂದರು.

‘ಕಲಾ ವಿಭಾಗದ ಅಭ್ಯರ್ಥಿಗಳು ಮಾತ್ರವೇ ಕನ್ನಡ ಮಾದ್ಯಮದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಪಿಸಿಎಂಬಿ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲವಾದ್ದರಿಂದ ಅವರು ಇಷ್ಟವಿಲ್ಲದಿದ್ದರೂ ಇಂಗ್ಲಿಷ್‍ನಲ್ಲೇ ಬರೆಯಬೇಕಿತ್ತು. ಈಗ ಪುಸ್ತಕಗಳು ಕನ್ನಡ ಮಾಧ್ಯಮದಲ್ಲಿ ದೊರೆಯುವ ಅವಕಾಶವಾಗಿರುವುದರಿಂದ ಪಿಸಿಎಂಬಿ ವಿದ್ಯಾರ್ಥಿಗಳೂ ಇನ್ನು ಮುಂದೆ ಕನ್ನಡದಲ್ಲಿ ಬರೆಯಬಹುದಾಗಿದೆ. ಉಪನ್ಯಾಸಕರು ಕೂಡಾ ಕನ್ನಡದಲ್ಲಿ ಬೋಧಿಸಲು ಸಹಾಯಕವಾಗಿದೆ’ ಎಂದು ಸುರೇಶ್ ಕುಮಾರ್ ಹೇಳಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ದೇಶದ ಎಲ್ಲ ಭಾಗದ ಮಕ್ಕಳೊಂದಿಗೆ ನಮ್ಮ ಮಕ್ಕಳೂ ಸ್ಪರ್ಧಿಸಬೇಕಾಗಿದೆ. ನಮ್ಮ ಸಿಇಟಿ ಅಷ್ಟೇ ಅಲ್ಲ, ಜೆಇಇ, ನೀಟ್ ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸ್ಪರ್ಧಿಸಲು ಅನುವಾಗುವಂತೆ 2013-14ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಪ್ರಚಲಿತದಲ್ಲಿದ್ದ ಪಠ್ಯಕ್ರಮಗಳನ್ನು ಕೇಂದ್ರೀಯ ಶಾಲಾ ಕಾಲೇಜುಗಳಲ್ಲಿ ಪ್ರಚಲಿತವಿರುವ ಪಠ್ಯಕ್ರಮಕ್ಕೆ ಬದಲಿಸಲಾಗಿದೆ. ನಮ್ಮ ರಾಜ್ಯದ ಬುದ್ಧಿವಂತ ಮಕ್ಕಳು ಯಾವುದೇ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಸಮಬಲರಾಗಿ ಸ್ಪರ್ಧಿಸುವ ಉತ್ತಮ ಅವಕಾಶ ಈಗಿರುವುದರಿಂದ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಸಿಎಂಬಿ ಸಂಯೋಜನೆಯಲ್ಲಿ ಸಿಬಿಎಸ್‍ಇ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳನ್ನು ನಮ್ಮ ಮಕ್ಕಳು ಓದಬೇಕಾಗಿತ್ತು’ ಎಂದು ಸಚಿವರು ಹೇಳಿದರು.

‘ಸಿಬಿಎಸ್‍ಇ ಪಠ್ಯ ಅಳವಡಿಸಿಕೊಂಡಿದ್ದರಿಂದ ಇಂಗ್ಲಿಷ್‍ನಲ್ಲೇ ಪುಸ್ತಕಗಳಿದ್ದುದರಿಂದ ಕನ್ನಡ ಮಾಧ್ಯಮದಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿದ ಪಿಯುಸಿ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅದನ್ನು ಮನಗಂಡು ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾಗಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2015ರಿಂದಲೇ ಕನ್ನಡ ಮಾಧ್ಯಮಕ್ಕೆ ಪಠ್ಯಪುಸ್ತಕಗಳ ಅನುವಾದ ಒಂದು ಪ್ರಯತ್ನವಾಗಿತ್ತಾದರೂ ಅದು ಕೈಗೂಡಿರಲಿಲ್ಲ’ ಎಂದು ಅವರು ಹೇಳಿದರು.

‘ಈ ಕಾರ್ಯವನ್ನು ಚುರುಕುಗೊಳಿಸಲು ಅನುವಾಗುವಂತೆ ಭೌತ ವಿಜ್ಞಾನ ರಸಾಯನ ವಿಜ್ಞಾನ, ಗಣಿತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳಿಗೆ ಒಂದೊಂದರಂತೆ 4 ವಿವಿಧ ಸಮಿತಿಗಳನ್ನು ರಚಿಸಿ ಪಠ್ಯವನ್ನು ಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಿ ಪುನರ್ ಪರಿಶೀಲಿಸಿ ಮುದ್ರಣ ಕಾರ್ಯ ಪೂರ್ಣಗೊಳಿಸಿದೆ. ವಿಜ್ಞಾನ ಸಂಯೋಜನೆ ಹೊಂದಿರುವ ರಾಜ್ಯದ 650 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯಗಳಿಗೆ ಒಂದು ಸೆಟ್ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಆಸಕ್ತರಿಗೆ ಈ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ನೀಟ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಆಂಗ್ಲ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮದಲ್ಲೂ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

‘ಇಂಗ್ಲಿಷ್‍ನಲ್ಲಿ ಪಾಠ ಕೇಳಿ ಕನ್ನಡದಲ್ಲಿ ಪರೀಕ್ಷೆ ಬರೆಯುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದುದನ್ನು ಮನಗಂಡು ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಮತ್ತು ಕಲಿಯಲು ಇಚ್ಛಿಸುವ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಇದು ಹೆಚ್ಚಿನ ಪ್ರೇರೇಪಣೆ ನೀಡಲಿದೆ. ಪಿಸಿಎಂಬಿ ಸಂಯೋಜನೆಯಲ್ಲಿ ಬೋಧನೆ ಇಂಗ್ಲಿಷ್‍ನಲ್ಲೇ ಇರುತ್ತದೆ. ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯಲು ಅವಕಾಶಗಳಿವೆ. ಇಂಗ್ಲಿಷ್‍ನಲ್ಲಿ ಪಾಠ ಕೇಳಿದ್ದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಬರೆಯಲು ತೊಡಕಾಗುತ್ತದೆ. ಆದರೆ, ಈಗ ಪುಸ್ತಕಗಳೇ ಕನ್ನಡ ಮಾಧ್ಯಮದಲ್ಲಿ ದೊರೆಯುತ್ತವಾದ್ದರಿಂದ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಸುರೇಶ್ ಕುಮಾರ್ ಹೇಳಿದರು.

‘ಯಾವುದೇ ಪಠ್ಯಕ್ರಮದ ಕುರಿತಾಗಲೀ ವಿದ್ಯಾರ್ಥಿಗಳಿಗೆ ಆತಂಕವಿರುವುದು ಸಹಜವೇ ಹೌದು. ಅದರಲ್ಲೂ ಹೊಸ ಪಠ್ಯಕ್ರಮವು ಉಪನ್ಯಾಸಕರಾಗಲಿ ಇಲ್ಲವೇ ವಿದ್ಯಾರ್ಥಿಗಳಿಗಾಗಲೀ ತನ್ನದೇ ಆದ ಸವಾಲುಗಳನ್ನು ಮುಂದೊಡ್ಡುತ್ತದೆ ಎಂಬುದು ಸುಳ್ಳಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಕ್ರಮಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದೆ. ಈ ಕನ್ನಡ ಅವತರಣಿಕೆಯ ಪುಸ್ತಕಗಳನ್ನು ಪಿಯುಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗ ಸದುಪಯೋಗಪಡಿಸಿಕೊಳ್ಳತ್ತದೆಂಬ ವಿಶ್ವಾಸ ನನ್ನದು’ ಎಂದರು.

ಪದವಿ ಪೂರ್ವ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT