ಬೆಂಗಳೂರು: ‘ಮುಸ್ಲಿಂ ಸಮುದಾಯದ ಗೂಂಡಾಗಳನ್ನು ಕರೆಸಿ ಮುಸ್ಲಿಂ ನಾಯಕರೇ ಬುದ್ದಿವಾದ ಹೇಳಬೇಕು. ಇಲ್ಲವಾದರೆ ಅಂತಹ ಗೂಂಡಾಗಳನ್ನು ಸರ್ಕಾರವೇ ನೋಡಿಕೊಳ್ಳುತ್ತದೆ’ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
‘ಕೆಲವು ಹಿರಿಯ ಮುಸ್ಲಿಂ ನಾಯಕರು ಶಾಂತಿ ಕಾಪಾಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಿದ್ದಾರೆ. ಗೂಂಡಾಗಿರಿ ಮಾಡುವ ಯುವಕರನ್ನು ಕರೆಸಿ ಬುದ್ದಿವಾದ ಹೇಳಬೇಕು. ಇಲ್ಲವಾದರೆ, ಅಂತಹ ಗೂಂಡಾಗಳನ್ನು ಹಿಂದೂ ಸಮಾಜವೇ ನೋಡಿಕೊಳ್ಳುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಹೀಗಾಗಿ ಇಂತಹ ಘಟನೆಗಳನ್ನು ನಡೆದಾಗ ಖಂಡನೆ ಮಾಡದೇ ಮೌನವಾಗಿರುತ್ತಾರೆ. ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ಹರಿದು ಹಾಕಿದ ವ್ಯಕ್ತಿ ಕಾಂಗ್ರೆಸ್ ಕಾರ್ಪೊರೇಟರೊಬ್ಬರ ಗಂಡ. ಆತ ಎಸ್ಡಿಪಿಐ ಕಾರ್ಯಕರ್ತ. ಇವೆಲ್ಲ ಮಾಡಿ ಕೊನೆಯಲ್ಲಿ ಬಿಜೆಪಿ ಕೋಮುಗಲಭೆ ಮಾಡುತ್ತದೆ ಎಂದು ದೂರುತ್ತಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ನಡೆದ ಘಟನೆಯ ಬಗ್ಗೆ ಚರ್ಚೆ ಮಾಡಿದ್ದೇನೆ. ಪೊಲೀಸರು ಅಲ್ಲಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಅಭಿನಂದಿಸುತ್ತೇನೆ ಎಂದರು.
ರಾಜ್ಯದಲ್ಲಿ ಎಸ್ಡಿಪಿಐ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚೆ ಮಾಡಿದ್ದೇನೆ. ಅದೂ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಹಿಂದುಗಳನ್ನು ಕೊಲೆ ಮಾಡುವ ಎಸ್ಡಿಪಿಐ ಮತ್ತು ಪಿಎಫ್ಐ ಮನಸ್ಥಿತಿ ಬದಲಾಗಿಲ್ಲ. ಕೇರಳ ಮತ್ತು ಹೊರ ರಾಜ್ಯಗಳಿಂದ ಬಂದವರಿಂದ ಈ ರೀತಿ ಕೃತ್ಯ ನಡೆಯುತ್ತಿದೆ. ಶಿವಮೊಗ್ಗದವರು ಶಾಂತಿಪ್ರಿಯರು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವ ಬೆಳವಣಿಗೆಯನ್ನು ಸಹಿಸಬಾರದು. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.