ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಅವರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ನಟಿ ಸಂಜನಾ ಅವರನ್ನು ಪುನಃ ಸಿಸಿಬಿ ಕಸ್ಟಡಿಗೆ ವಹಿಸಲಾಗಿದೆ.
ಡ್ರಗ್ಸ್ ಪೆಡ್ಲರ್ ಜೊತೆ ಒಡನಾಟವಿಟ್ಟುಕೊಂಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ಕೇಶವಮೂರ್ತಿಯ ಮಗ ಯಶಸ್ಗಾಗಿ ಎನ್ಸಿಬಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದರು. ಅವಧಿ ಮುಗಿದಿದ್ದ
ರಿಂದಾಗಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆರೋಪಿಗಳಾದ ರಾಗಿಣಿ, ಪ್ರಶಾಂತ್ ರಂಕಾ, ಸಿಮೋನ್, ರಾಹುಲ್ ಹಾಗೂ ನಿಯಾಜ್ನನ್ನು 14 ದಿನದವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತು. ಅವರೆಲ್ಲರನ್ನೂ ಪೊಲೀಸ್ಜೀಪಿನಲ್ಲೇ ಪರಪ್ಪನ ಅಗ್ರಹಾರ ಕೇಂದ್ರಕಾರಾಗೃಹಕ್ಕೆ ಕರೆದೊಯ್ಯಲಾಯಿತು.ಮುಂದಿನ 14 ದಿನಗಳವರೆಗೆ ಆರೋಪಿಗಳು, ಜೈಲಿನಲ್ಲೇ ಇರಲಿದ್ದಾರೆ.
‘ಸಂಜನಾ, ರವಿಶಂಕರ್, ವಿರೇನ್ನಿಂದ ಮಾಹಿತಿ ಕಲೆಹಾಕಬೇಕಿದೆ. ಅವರನ್ನು ಕಸ್ಟಡಿಗೆ ನೀಡಿ’ ಎಂದು ಪೊಲೀಸರು ಕೋರಿದರು. ಅದನ್ನು ಮನ್ನಿಸಿದ ನ್ಯಾಯಾಲಯ, ಮೂವರನ್ನು ಸೆ. 16ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿತು.
ನೋಟಿಸ್ ನೀಡಿದ್ದ ಎನ್ಸಿಬಿ: ಮುಂಬೈನಲ್ಲಿ ಸಿಕ್ಕಿ ಬಿದ್ದಿದ್ದ ಡ್ರಗ್ಸ್ ಪೆಡ್ಲರ್ ರೆಹಮಾನ್ ಎಂಬಾತ, ಬಿಬಿಎಂಪಿಯ ಬೆಂಗಳೂರಿನ ಮಹಾಲಕ್ಷ್ಮೀಪುರ ವಾರ್ಡ್ನ ಮಾಜಿ ಸದಸ್ಯ, ಕಾಂಗ್ರೆಸ್ನ ಕೇಶವಮೂರ್ತಿ ಅವರ ಪುತ್ರ ಯಶಸ್ ಅವರಿಗೆ ಡಾರ್ಕ್ನೆಟ್ ಮೂಲಕ ಡ್ರಗ್ಸ್ ಮಾರಾಟ ಮಾಡಿರುವುದಾಗಿ ಹೇಳಿದ್ದ. ಅದಕ್ಕೆ ಸಂಬಂಧಪಟ್ಟ ದಾಖಲೆ ಕಲೆಹಾಕಿದ್ದ ಎನ್ಸಿಬಿ, ‘ಸೆಪ್ಟೆಂಬರ್ 7ರಂದು ಮುಂಬೈನಲ್ಲಿರುವ ಎನ್ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ಸೂಚಿಸಿತ್ತು.
ವಿಚಾರಣೆಗೆ ಹಾಜರಾಗದ ಯಶಸ್ ತಲೆಮರೆಸಿಕೊಂಡಿದ್ದಾರೆ. ಆತನ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರಿಂದ ಎನ್ಸಿಬಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ರಾಗಿಣಿ ಕೈದಿ ಸಂಖ್ಯೆ– 8912
ನಟಿ ರಾಗಿಣಿ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಮಹಿಳಾ ಜೈಲಿನಲ್ಲಿ ಇರಿಸಲಾಗಿದೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 8912 ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.