ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: 38 ವರ್ಷಗಳಿಂದ ಅವಿರೋಧ ಆಯ್ಕೆ!

ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಗ್ರಾಮ ಪಂಚಾಯ್ತಿ: 1982ರ ನಂತರ ಚುನಾವಣೆಯೇ ನಡೆದಿಲ್ಲ
Last Updated 16 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ 38 ವರ್ಷಗಳಿಂದ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿದೆ. ಈ ಬಾರಿಯೂ ಮುಂದುವರೆದಿದೆ.

ಅಮಲಝರಿ ಗ್ರಾಮ ಯಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಏಳು ಸಾವಿರ ಜನಸಂಖ್ಯೆ ಇದೆ. ಯಡಹಳ್ಳಿಯ 10 ಹಾಗೂ ಅಮಲಝರಿಯ ಎಂಟು ಸೇರಿ 18 ಜನ ಸದಸ್ಯರಿದ್ದಾರೆ.

ಮಾದರಿ ಗ್ರಾಮ ಪಂಚಾಯ್ತಿ: ಈ ಹಿಂದೆ ರಾಜ್ಯಮಟ್ಟದಲ್ಲಿ ಹಲವು ಬಾರಿ ಸ್ಚಚ್ಛ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಭಾಜನವಾಗಿರುವ ಯಡಹಳ್ಳಿಯಲ್ಲಿ ಪ್ರತೀ ಮನೆಯಲ್ಲೂ ಶೌಚಾಲಯ ಇದೆ. ಮನೆಗೊಂದು ತಿಪ್ಪೆ ಗುಂಡಿ ಪಂಚಾಯಿತಿಯಿಂದಲೇ ವೈಜ್ಞಾನಿಕವಾಗಿ ಕಟ್ಟಿಸಿಕೊಡಲಾಗಿದೆ.

ಗ್ರಾಮದ ಪ್ರತಿ ಬೀದಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸ್ಥಳೀಯರು ಊರಿನ ರಸ್ತೆಗಳಿಗೆ ರಾಜ್ಯದ ಪ್ರಮುಖ ನದಿಗಳ ಹೆಸರು ಇಟ್ಟಿದ್ದಾರೆ.

ವ್ಯಸನಮುಕ್ತ ವಾತಾವರಣ: ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ಯಾವುದೇ ಅಂಗಡಿಯಲ್ಲಿ ಗುಟ್ಕಾ, ಪಾನ್, ಸಿಗರೇಟ್ ಮಾರಾಟ ಮಾಡುವಂತಿಲ್ಲ. ಈ ಕಟ್ಟಳೆ ಮುರಿದವರು ದಂಡ ಪಾವತಿಸಬೇಕಿದೆ.

‘1982ರ ನಂತರ ಗ್ರಾಮ ಪಂಚಾಯಿತಿ ಚುನಾವಣೆಯೇ ನಡೆದಿಲ್ಲ. ಆಗಿನಿಂದಲೂ ಊರಿನ ಹಿರಿಯರೇ ಕೂಡಿಕೊಂಡು ತೀರ್ಮಾನಿಸುತ್ತಾರೆ. ಹೀಗಾಗಿ ಚುನಾವಣೆ ನೆಪದಲ್ಲಿ ಊರಿನಲ್ಲಿ ಯಾವುದೇ ಜಗಳ-ವೈಷಮ್ಯಕ್ಕೆ ಆಸ್ಪದ ಆಗಿಲ್ಲ’ ಎಂದು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಕಾರ್ಯದರ್ಶಿ ಈರಣ್ಣ ಅರಕೇರಿ ಹೇಳುತ್ತಾರೆ.

‘ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮೀಸಲಾತಿಗೆ ಅನುಗುಣವಾಗಿ ಆಯಾ ಸಮುದಾಯದ ಹಿರಿಯರಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಸೂಚಿಸಲಾಗುತ್ತದೆ. ಊರಿನ ಹಿರಿಯರು ಸಭೆ ಸೇರಿ ಆಯಾ ಸಮುದಾಯದವರು ಒಮ್ಮತದಿಂದ ಆಯ್ಕೆ ಮಾಡಿದ ವ್ಯಕ್ತಿಯ ಹೆಸರನ್ನು ಅಂತಿಮಗೊಳಿಸಿ ಘೋಷಣೆ ಮಾಡುತ್ತಾರೆ’ ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ಈರಣ್ಣ ಮಾಹಿತಿ ನೀಡಿದರು.

ಯಡಹಳ್ಳಿ ಬೀಳಗಿ ಮಾಜಿ ಶಾಸಕ ಜೆ.ಟಿ.ಪಾಟೀಲ ಹಾಗೂ ರಾಜ್ಯದ ಹಿರಿಯ ವನ್ಯಜೀವಿ ತಜ್ಞ ಡಾ.ಎಂ.ಆರ್.ದೇಸಾಯಿ ಅವರ ಹುಟ್ಟೂರು.

‘ಲಾಭ ಪಡೆಯುವ ವ್ಯವಹಾರ ಅಲ್ಲ’
‘ಪಂಚಾಯಿತಿ ಸದಸ್ಯ ಸ್ಥಾನ ಎಂದರೆ ಹಣ, ಅಧಿಕಾರ ಅಲ್ಲ ಬದಲಿಗೆ ಸಮಾಜ ಸೇವೆ ಎಂಬ ಭಾವನೆ ಮೊದಲಿನಿಂದಲೂ ನಮ್ಮೂರಿನಲ್ಲಿ ಮೂಡಿಸಿದ್ದೇವೆ. ಯಾರಿಗೂ ಒತ್ತಾಯಿಸುವುದಿಲ್ಲ, ಮನವೊಲಿಸುತ್ತೇವೆ. ಅವಿರೋಧ ಆಯ್ಕೆ ಸಂಪ್ರದಾಯ ಮುಂದುವರೆಸಲು ಸಾಧ್ಯವಾಗಿದೆ’ ಎಂದು ವನ್ಯಜೀವಿ ತಜ್ಞ ಡಾ.ಎಂ.ಆರ್. ದೇಸಾಯಿ ಹೇಳುತ್ತಾರೆ.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮದ ಪ್ರಾಥಮಿಕ ಸಂಬಂಧಗಳು ಮುಖಾಮುಖಿಯಾಗುತ್ತವೆ. ಊರಿನ ವಾತಾವರಣ ಕೆಡಿಸಬಾರದು ಎಂಬ ಉದ್ದೇಶವೂ ಅವಿರೋಧ ಆಯ್ಕೆಯ ಹಿಂದಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವನ್ಯಜೀವಿ ತಜ್ಞ ಡಾ.ಎಂ.ಆರ್. ದೇಸಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT