ಗುರುವಾರ , ಮಾರ್ಚ್ 30, 2023
24 °C
ಅಭಿಯಾನಕ್ಕೆ ಕರ್ನಾಟಕದಿಂದ ಚಾಲನೆ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್

ಯುವ ಕಾಂಗ್ರೆಸ್‌ನಿಂದ ‘ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯುವ ಕಾಂಗ್ರೆಸ್‌ ವತಿಯಿಂದ ದೇಶದಾದ್ಯಂತ ಉದ್ಯೋಗ ನೀಡಿ ಅಭಿಯಾನ ನಡೆಸಲು ಉದ್ದೇಶಿಸಿದ್ದು, ಕರ್ನಾಟಕದಿಂದ ಇದಕ್ಕೆ ಚಾಲನೆ ನೀಡುತ್ತಿದ್ದೇವೆ’ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದರು.

‘ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ’ ಅಭಿಯಾನದ ಭಿತ್ತಿಪತ್ರವನ್ನು ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ದೇಶದಲ್ಲಿ ಶೇ 65ರಷ್ಟು ಯುವಕರು ಉದ್ಯೋಗ ಇಲ್ಲದೆ ಬೀದಿಗಳಲ್ಲಿ ಅಡ್ಡಡುತ್ತಿದ್ದಾರೆ‌. ಕೇಂದ್ರ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ’ ಎಂದು ದೂರಿದರು.

‘ಮೋದಿ ಸರ್ಕಾರ ಆಡಳಿತಕ್ಕೆ ಬಂದು ಆರು ವರ್ಷ ಆಯಿತು. ಅವರು ನೀಡಿದ ಭರವಸೆಯಂತೆ 12 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಮೋದಿ ಸರ್ಕಾರ ಕೆಲಸ ಕೊಡುವ ಬದಲುಮ ಇರುವ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಕೆಲಸ ಇಲ್ಲದೆ ಸಾಕಷ್ಟು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

‘ಉದ್ಯೋಗ ಕೊಡಿ ಎಂದು ಕೇಳಿದರೆ, ಪಕೋಡ ಮಾಡಿ ಮಾರಿ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ ಸಾಕಷ್ಟು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಮುನ್ನಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಯುವಕರು ಬೀದಿಗೆ ಬಂದಿದ್ದಾರೆ’ ಎಂದರು.

‘ಮೋದಿಯವರು ಇತ್ತೀಚೆಗೆ ತಮ್ಮ ಮನೆಯಲ್ಲಿ ನವಿಲುಗಳಿಗೆ ಕಾಳು ತಿನ್ನಿಸಿದರು. ಅದು ಸಂತೋಷದ ವಿಷಯ. ಅದೇ ರೀತಿ ನಮ್ಮ ಯುವಕರು ಸಹ ಕೆಲಸ ಇಲ್ಲದೆ ಓಡಾಡುತ್ತಿರುವುದು ಕಾಣಿಸುತ್ತಿಲ್ಲವೇ’ ಎಂದು ಶ್ರೀನಿವಾಸ್ ಕಿಡಿಕಾರಿದರು.

‘ಕೇಂದ್ರ ಸರ್ಕಾರ ಕೇವಲ ಟೆಲಿವಿಷನ್ ಸರ್ಕಾರ. ಜಿಡಿಪಿ ಕುಸಿತ ಕಾಣಲು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್’ ಎಂದ ಅವರು, ‘ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಮತ್ತು ಸಚಿವರ ಮನೆ ಎದುರು ಉದ್ಯೋಗ ಕೊಡಿ ಎಂದು ಆಗ್ರಹಿಸುತ್ತೇವೆ’ ಎಂದರು.

‘ಡ್ರಗ್ಸ್ ದಂಧೆಯ ವಿರುದ್ಧವೂ ಯುವ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ. ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಡ್ರಗ್ಸ್ ಹಾವಳಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿತ್ತು. ಈಗ ಕರ್ನಾಟಕದಲ್ಲೂ ಕೇಳಿಬರುತ್ತಿದೆ. ಇದರ ವಿರುದ್ಧ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ. ಡ್ರಗ್ಸ್ ದಂಧೆಯಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು