ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ದೆಹಲಿಯಲ್ಲಿ 'ದೇಶದ ಮೊದಲ ವರ್ಚುವಲ್ ಶಾಲೆ'ಯನ್ನು ಉದ್ಘಾಟಿಸಿದರು. ಭೌತಿಕವಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗದವರಿಗೆ ಅನುಕೂಲವಾಗಲೆಂದು ಈ ಶಾಲೆಗಳನ್ನು ದೆಹಲಿ ಸರ್ಕಾರ ಆರಂಭಿಸಿರುವುದಾಗಿ ಅವರು ಹೇಳಿದರು.
‘ನಾವು ‘ಹ್ಯಾಪಿನೆಸ್’ ತರಗತಿಗಳನ್ನು ಆರಂಭಿಸಿದೆವು. ದೇಶಭಕ್ತಿಯ ಪಠ್ಯಕ್ರಮಗಳನ್ನು ಜಾರಿಗೆ ತಂದೆವು. ಅನೇಕ ವಿಶೇಷ ಶಾಲೆಗಳನ್ನು ಪ್ರಾರಂಭಿಸಿದ್ದೇವೆ. ಭಿಕ್ಷೆ ಬೇಡುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ನಿರ್ಮಿಸುತ್ತಿದ್ದೇವೆ. ಕ್ರೀಡಾ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಸೇನಾ ಪೂರ್ವಸಿದ್ಧತಾ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇಂದು ದೇಶದ ಮೊದಲ ವರ್ಚುವಲ್ ಶಾಲೆಯನ್ನೂ ಆರಂಭಿಸಿದ್ದೇವೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಕೇಜ್ರಿವಾಲ್ ಹೇಳಿದರು.
ದೇಶದ ಯಾವುದೇ ಮೂಲೆಯ ವಿದ್ಯಾರ್ಥಿಗಳು ಈ ಶಾಲೆಯ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ ಎಂದು ಅವರು ಘೋಷಿಸಿದರು.
ಆದರೆ, ದೇಶದ ಮೊದಲ ವರ್ಚುವಲ್ ಶಾಲೆಯನ್ನು ಆರಂಭಿಸಿದ್ದು ದೆಹಲಿ ಸರ್ಕಾರವಲ್ಲ ನಾವು ಎಂದು ಕೇಂದ್ರ ಶಿಕ್ಷಣ ಇಲಾಖೆ ಹೇಳಿದೆ.
‘ಭಾರತದ ಮೊದಲ ವರ್ಚುವಲ್ ಶಾಲೆಯ ಆರಂಭದ ಕುರಿತು ಕೆಲವು ಮಾಧ್ಯಮ ವರದಿಗಳನ್ನು ಗಮನಿಸಿದ್ದೇವೆ. ದೇಶದ ಮೊದಲ ವರ್ಚುವಲ್ ಶಾಲೆಯನ್ನು ಕೇಂದ್ರ ಶಿಕ್ಷಣ ಸಚಿವರು ಕಳೆದ ವರ್ಷ ಆಗಸ್ಟ್ನಲ್ಲೇ ಉದ್ಘಾಟನೆ ಮಾಡಿದ್ದಾರೆ’ ಎಂದು 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್' (ಎನ್ಐಒಎಸ್) ಹೇಳಿದೆ.
ಪ್ರಸ್ತುತ ಎನ್ಐಒಎಸ್ನೊಂದಿಗೆ ಸಂಯೋಜಿತವಾಗಿರುವ 7,000 ಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಎನ್ಐಒಎಸ್ ವರ್ಚುವಲ್ ಓಪನ್ ಸ್ಕೂಲ್ನಲ್ಲಿ ಕಲಿಯುವವರಿಗೆ 1,500 ಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳು ಕೌಶಲ ಆಧಾರಿತ ವೃತ್ತಿಪರ ಕೋರ್ಸ್ ಕಲಿಸುತ್ತಿವೆ. ಎನ್ಐಒಎಸ್ನಿಂದ ಮಾನ್ಯತೆ ಪಡೆದ ಈ ಅಧ್ಯಯನ ಕೇಂದ್ರಗಳಿಂದ ನೇರ ಪ್ರಸಾರ ಮಾಹಿತಿ ವಿನಿಮಯ ನಡೆಯುತ್ತಿದೆ’ ಎಂದು ಅದು ತಿಳಿಸಿದೆ.
ಈ ಮೂಲಕ, ದೇಶದ ಮೊದಲ ವರ್ಚುವಲ್ ಶಾಲೆ ತಮ್ಮದೆಂಬ ಎಎಪಿಯ ವಾದವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.