ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಚುನಾವಣಾ ಬಾಂಡ್‌? ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದೇಕೆ?

Published 15 ಫೆಬ್ರುವರಿ 2024, 11:46 IST
Last Updated 15 ಫೆಬ್ರುವರಿ 2024, 11:46 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿದೆ.

ಹಾಗಾದರೆ ಈ ಚುನಾವಣಾ ಬಾಂಡ್‌ಗಳು ಅಂದರೆ ಏನು?

ಸರಳವಾಗಿ ಹೇಳುವುದಾದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಂದು ಸಾಧನ. 2017–18ರ ಬಜೆಟ್‌ನಲ್ಲಿ ಇದನ್ನು ಪರಿಚಯಿಸಲಾಗಿತ್ತು.

ಚುನಾವಣಾ ಬಾಂಡ್ ಎಂದರೆ ಪ್ರಾಮಿಸರಿ ನೋಟ್‌ನ (promissory note) ಸ್ವರೂಪದಲ್ಲಿ ನೀಡಲಾದ ಬಾಂಡ್. ಇದರಲ್ಲಿ ಖರೀದಿದಾರ ಅಥವಾ ಪಾವತಿದಾರನನ ಹೆಸರು ಇರುವುದಿಲ್ಲ. ಯಾವುದೇ ಮಾಲೀಕತ್ವದ ಮಾಹಿತಿಯನ್ನೂ ದಾಖಲಿಸಿರುವುದಿಲ್ಲ. ಇದನ್ನು ಹೊಂದಿರುವವರು (ಅಂದರೆ ರಾಜಕೀಯ ಪಕ್ಷ) ಇದರ ಮಾಲೀಕರೆಂದು ಪರಿಗಣಿಸಲಾಗುತ್ತದೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವಿವರಿಸುತ್ತದೆ.

ಈ ಯೋಜನೆಯಡಿ ದೇಶದ ‍ಪ್ರಜೆಗಳು ಅಥವಾ ಕಂಪನಿಗಳು ₹1ಸಾವಿರ, ₹10 ಸಾವಿರ, ₹1 ಲಕ್ಷ, ₹10 ಲಕ್ಷ ಹಾಗೂ ₹1 ಕೋಟಿಯ ಅಪವರ್ತನದಲ್ಲಿ ರಾಜಕೀಯ ಪಕ್ಷಗಳಿಂದ ಬಾಂಡ್‌ಗಳನ್ನು ಖರೀದಿ ಮಾಡಬಹುದು.

ಈ ಬಾಂಡ್‌ಗಳು ಒಬ್ಬ ವ್ಯಕ್ತಿ ಅಥವಾ ಹಲವು ವ್ಯಕ್ತಿಗಳು ಸೇರಿ ಜಂಟಿಯಾಗಿ ಖರೀದಿ ಮಾಡಬಹುದು. ಇದಕ್ಕೆ ಯಾವುದೇ ಮಿತಿ ಇಲ್ಲ. 15 ದಿನಗಳ ಒಳಗಾಗಿ ರಾಜಕೀಯ ಪಕ್ಷಗಳು ಇದನ್ನು ನಗದೀಕರಿಸಿಕೊಳ್ಳಬೇಕು. ಒಂದು ವೇಳೆ 15 ದಿನಗಳಲ್ಲಿ ಇದನ್ನು ನಗದೀಕರಿಸಿಕೊಳ್ಳದಿದ್ದಲ್ಲಿ, ಸಂಬಂಧಪಟ್ಟ ಬ್ಯಾಂಕ್‌ಗಳು ಅದನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಜಮೆ ಮಾಡಬೇಕು.

ಚುನಾವಣಾ ಆಯೋಗಕ್ಕೆ ವಾರ್ಷಿಕ ದೇಣಿಗೆಯ ಮಾಹಿತಿಯನ್ನು ಸಲ್ಲಿಸುವಾಗಲೂ, ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯ ಕೂಡ ರಾಜಕೀಯ ಪಕ್ಷಗಳಿಗೆ ಇಲ್ಲ.

ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಲಾಭವಾಗಿದ್ದು ಹೇಗೆ?

ಚುನಾವಣಾ ಬಾಂಡ್‌ಗಳ ದೊಡ್ಡ ಫಲ ಅನುಭವಿಸಿದ್ದು ಬಿಜೆಪಿ. ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, 2018 ಹಾಗೂ ಮಾರ್ಚ್‌ 2023ರ ನಡುವೆ ಈ ಬಾಂಡ್‌ಗಳ ಮೂಲಕ ಸಲ್ಲಿಸಲಾದ ದೇಣಿಗೆಯ ಶೇ 57ರಷ್ಟು ಬಿಜೆ‍ಪಿ ಪಾಲಾಗಿದೆ. ₹5,271 ಕೋಟಿಯಷ್ಟು ದೇಣಿಗೆ ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ಹರಿದು ಬಂದಿದೆ. ಎರಡನೆ ಸ್ಥಾನದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ₹952 ಕೋಟಿ ದೇಣಿಗೆ ಈ ಮೂಲಕ ಪಡೆದಿದೆ.

ಚುನಾವಣಾ ಬಾಂಡ್‌ನ ನಿಯಮದ ಪ್ರಕಾರ, ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ಮಾತ್ರ ಈ ಬಾಂಡ್‌ಗಳನ್ನು ಮಾರಾಟ ಮಾಡಬಹುದು. ಹೀಗಾಗಿ ಸಹಜವಾಗಿಯೇ ಎಲ್ಲಾ ಮಾಹಿತಿಗಳು ಸರ್ಕಾರಕ್ಕೆ ಲಭಿಸಲಿದೆ ಎನ್ನುವುದು ತರ್ಕ.

‘ಚುನಾವಣಾ ಬಾಂಡ್‌ ಎಂದು ಹೆಸರಿದ್ದರೂ, ಅದರಿಂದ ಸಂಗ್ರಹವಾದ ಹಣವನ್ನು ಚುನಾವಣೆಗಾಗಿಯೇ ಬಳಸಬೇಕು ಎನ್ನುವ ನಿಯಮವೇನೂ ಇಲ್ಲ. ಯಾರಿಗೆಲ್ಲಾ ಹಣ ಸಿಗುತ್ತದೆಯೋ ಅವರು ಅದನ್ನು ಮಾಧ್ಯಮಗಳ ಖರೀದಿಗೆ, ಜಾಹೀರಾತಿಗೆ ಹೀಗೆ ಎಲ್ಲದಕ್ಕೂ ಬಳಸಬಹದು. ನಿಮ್ಮ ಬಳಿ ಹಣ ಇದ್ದರೆ ಅದನ್ನು ಎಲ್ಲಿ ಬೇಕಾದರೂ ಬಳಸಬಹುದು’ ಎಂದು ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್‌ ಹಾಗೂ ಚುನಾವಣಾ ದೇಣಿಗೆಯಲ್ಲಿ ಪಾರದರ್ಶಕತೆ ಎನ್ನುವ ಅಭಿಯಾನದ ನೇತೃತ್ವವನ್ನೂ ವಹಿಸಿರುವ ಲೋಕೇಶ್ ಬತ್ರಾ ‘ಅಲ್‌ ಜಜೀರಾ’ ಸುದ್ದಿ ಸಂಸ್ಥೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಬಿಜೆಪಿ ಹಾಗೂ ಅದರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಡೆದಿರುವ ದೇಣಿಗೆ ಪ್ರಮಾಣದಲ್ಲಿ ಇರುವ ಬೃಹತ್ ವ್ಯತ್ಯಾಸ, ಈ ಚುನಾವಣಾ ಬಾಂಡ್ ಸೃಷ್ಟಿಸಿರುವ ಅಸಮಾನತೆಯ ಪ್ರತೀಕ ಎನ್ನುವುದೂ ವಿಮರ್ಶಕರ ವಾದ. ಉದಾಹರಣೆಗೆ 2023ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕ್ರಮವಾಗಿ ₹197 ಕೋಟಿ ಹಾಗೂ ₹136 ಕೋಟಿ ಖರ್ಚು ಮಾಡಿದ್ದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿದೆ.

ಇದರ ಜತೆಗೆ ಕಾಲಕಾಲಕ್ಕೆ ಈ ಬಾಂಡ್‌ಗಳನ್ನು ಮಾರಾಟ ಮಾಡುವ ಹಕ್ಕು ಕೇಂದ್ರ ಸರ್ಕಾರದ ಬಳಿ ಇದೆ. ಆದರೆ ಚುನಾವಣಾ ಬಾಂಡ್‌ಗಳ ನಿಯಮವು ತಾಂತ್ರಿಕವಾಗಿ , ಪ್ರತೀ ತ್ರೈಮಾಸಿಕದ ಮೊದಲ 10 ದಿನಗಳಲ್ಲಿ ಮಾತ್ರ ಈ ಬಾಂಡ್‌ಗಳ ಮಾರಾಟಕ್ಕೆ ಅವಕಾಶ ನೀಡುತ್ತದೆ. ಅಂದರೆ ಜನವರಿ, ಏಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಮಾತ್ರ ಈ ಬಾಂಡ್‌ಗಳ ಖರೀದಿಗೆ ಅವಕಾಶ ಇದೆ. ಆದರೆ 2018ರಲ್ಲಿ ಈ ನಿಯಮವನ್ನು ಮುರಿದು ಮೇ ಹಾಗೂ ನವೆಂಬರ್ ತಿಂಗಳಲ್ಲಿ ಬಾಂಡ್‌ಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಇದೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆಗೆ ಬಂದಿತ್ತು.

ಚುನಾವಣಾ ಬಾಂಡ್‌ಗೆ ಟೀಕೆ ಏಕೆ?

ಯಾವುದೇ ಮೂಲಗಳಿಂದ, ಯಾರಿಂದ ಬೇಕಾದರೂ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸಬಹುದು. ಇದು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಯೋಜನೆ. ಇದರ ಮೂಲಕ ಆಡಳಿತ ಪಕ್ಷಕ್ಕೆ ಕಾರ್ಪೊರೇಟ್ ಕಂಪನಿಗಳು ಯಥೇಚ್ಛವಾಗಿ ದೇಣಿಗೆ ನೀಡಿ, ಸರ್ಕಾರದ ತೀರ್ಮಾನಗಳ ಮೇಲೆ ‍ಪ್ರಭಾವ ಬೀರಬಹುದು.

‘ಕಾರ್ಪೊರೇಟ್ ಕಂಪನಿಗಳು ಇದನ್ನು ಬಂಡವಾಳವಾಗಿ ಪರಿಗಣಿಸುತ್ತದೆ’ ಎಂದು ಎ.ಡಿ.ಆರ್‌. ನ ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್‌ ಅನಿಲ್ ವರ್ಮಾ ಅಭಿಪ್ರಾಯಪಟ್ಟಿದ್ದು, ಚುನಾವಣಾ ರಾಜಕೀಯದಲ್ಲಿ ಸಮಾನತೆಯ ಪರಿಕಲ್ಪನೆಯನ್ನು ಚುನಾವಣಾ ಬಾಂಡ್‌ಗಳು ನಾಶಪಡಿಸಿವೆ ಎಂದು ಅವರು ಹೇಳಿದ್ದಾರೆ.

ಕೋರ್ಟ್ ಕದ ತಟ್ಟಿದ್ದು ಯಾರು?

ಚುನಾವಣಾ ಬಾಂಡ್‌ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಎ.ಡಿ.ಆರ್‌. ಹಾಗೂ ಕಾಮನ್‌ ಕಾಸ್‌ ಎನ್ನುವ ಎರಡು ಸೇವಾ ಸಂಸ್ಥೆಗಳು ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌ವಾದ) ಸುಪ್ರೀಂ ಕೋರ್ಟ್‌ನಲ್ಲಿ 2018ರಲ್ಲಿ ಎರಡು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದವು.

ಆರು ವರ್ಷಗಳ ಬಳಿಕ ಈಗ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. 2023ರ ನವೆಂಬರ್‌ನಲ್ಲಿ ಈ ಸಂಬಂಧ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಚುನಾವಣಾ ಬಾಂಡ್‌ ಯೋಜನೆಯು ‘ಗಂಭೀರ ನ್ಯೂನತೆಗಳನ್ನು’ ಹೊಂದಿದ್ದು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಇದು ಪಾರದರ್ಶಕತೆಯಿಂದಲೂ ಕೂಡಿಲ್ಲ, ಹಾಗಾಗಿ ಇದನ್ನು ತೆಗೆದುಹಾಕಬೇಕಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT