ಬೆಂಗಳೂರು: ದಿ ರಾಮೇಶ್ವರಂ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಂಕಿತ ಉಗ್ರ ಬಳ್ಳಾರಿಯ ಮಿನಾಜ್ ಅಲಿಯಾಸ್ ಸುಲೇಮಾನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಇದೀಗ ಮತ್ತೆ ಮೂವರು ಶಂಕಿತ ಉಗ್ರರನ್ನು ನ್ಯಾಯಾಲಯದ ಆದೇಶದ ಮೇರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
‘ಬಳ್ಳಾರಿಯ ಸೈಯದ್ ಸಮೀರ್ (19) , ಮುಂಬೈನ ಅನಾಸ್ ಇಕ್ಬಾಲ್ ಶೇಖ್ (23) ಹಾಗೂ ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೈನ್ನನ್ನು (26) ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಿನಾಜ್ ಜೊತೆಯಲ್ಲಿ ಈ ಮೂವರ ವಿಚಾರಣೆ ಚುರುಕುಗೊಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಐಎಸ್ ಜೊತೆ ನಂಟು ಹೊಂದಿದ್ದ ಈ ಶಂಕಿತ ಉಗ್ರರು, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದರು. ಇವರ ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್ಐಎ ಅಧಿಕಾರಿಗಳು, 2023ರ ಡಿಸೆಂಬರ್ 18ರಂದು ದೇಶದ 19 ಕಡೆ ದಾಳಿ ಮಾಡಿದ್ದರು. ಮಿನಾಜ್ ಹಾಗೂ ಇತರರನ್ನು ಬಂಧಿಸಿದ್ದರು. ಅಂದಿನಿಂದಲೇ ಅವರೆಲ್ಲ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು’ ಎಂದು ತಿಳಿಸಿವೆ.
‘ಜೈಲಿನಲ್ಲಿದ್ದ ಮಿನಾಜ್, ಸೈಯದ್ ಸಮೀರ್, ಅನಾಸ್ ಇಕ್ಬಾಲ್ ಹಾಗೂ ಶಯಾನ್ ರಹಮಾನ್ನನ್ನು ಎನ್ಐಎ ಅಧಿಕಾರಿಗಳು ಈಗಾಗಲೇ ಕಸ್ಟಡಿಗೆ ಪಡೆದಿದ್ದಾರೆ. ಇವರನ್ನು ಅಧಿಕಾರಿಗಳು, ಬಳ್ಳಾರಿಗೆ ಕರೆದೊಯ್ದು ವಿಚಾರಣೆ ತೀವ್ರಗೊಳಿಸಿದ್ದಾರೆ. ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.