ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆಯಷ್ಟೇ ಅಲ್ಲ, ಕನ್ನಡಕ್ಕೂ ಕೇಂದ್ರದ ಅನ್ಯಾಯ: ಸಚಿವ ಶಿವರಾಜ ತಂಗಡಗಿ

Published 20 ಫೆಬ್ರುವರಿ 2024, 23:43 IST
Last Updated 20 ಫೆಬ್ರುವರಿ 2024, 23:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ, ಅನುದಾನದ ಪಾಲಿನಲ್ಲಿ ಮಾತ್ರ ಅನ್ಯಾಯ ಮಾಡಿದ್ದಲ್ಲ. ಕನ್ನಡ ಭಾಷೆಯ ಬೆಳವಣಿಗೆಗೆ ಅನುದಾನ ನೀಡುವಲ್ಲಿಯೂ ಅನ್ಯಾಯ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು, ಕೈಗಾರಿಕೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂಬುದನ್ನು ಖಾತ್ರಿಪಡಿಸಲು ತರಲಾದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ–2024’ ಕುರಿತು ವಿಧಾನಪರಿಷತ್ತಿನಲ್ಲಿ ಮಂಗಳವಾರ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಈ ವಿಷಯದಲ್ಲಿ ಬಿಜೆಪಿ ಸದಸ್ಯರು ಕನ್ನಡ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.

ಮಸೂದೆ ಕುರಿತು ಮಾತನಾಡಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಹೆಚ್ಚಿನ ಪ್ರಾಧಾನ್ಯ ನೀಡಿದೆ. ಪ್ರತಿವರ್ಷ ಹಿಂದಿಗೆ ₹1,500 ಕೋಟಿ, ಸಂಸ್ಕೃತಕ್ಕೆ ₹400 ಕೋಟಿ ಕೊಟ್ಟರೆ ಕನ್ನಡಕ್ಕೆ ಕೇವಲ ₹3 ಕೋಟಿ ನೀಡಲಾಗುತ್ತಿದೆ. ಸಂಸ್ಕೃತ ಮಾತನಾಡುವವರು ದೇಶದಲ್ಲಿ 50 ಸಾವಿರ ಜನರಿದ್ದಾರೆ. ಆ ಭಾಷೆಗೆ ₹400 ಕೋಟಿ, ಏಳು ಕೋಟಿ ಜನ ಮಾತನಾಡುವ ಕನ್ನಡಕ್ಕೆ ₹3 ಕೋಟಿ ಮಾತ್ರ. ದೇಶದಲ್ಲಿ 21 ಭಾಷೆಗಳಲ್ಲಿ ಸಾಂವಿಧಾನಿಕ ಮಾನ್ಯತೆ ನೀಡಲಾಗಿದ್ದು, ಎಲ್ಲ ಭಾಷೆಗಳನ್ನೂ ಕೇಂದ್ರ ಸರ್ಕಾರ ಒಂದೇ ರೀತಿ ನೋಡಬೇಕು ಎಂದು ಒತ್ತಾಯಿಸಬೇಕಾಗಿದೆ ಎಂದರು.

ಬೆಂಗಳೂರಿನಲ್ಲಿ 108 ಭಾಷೆಗಳನ್ನು ಮಾತನಾಡುವ ಜನ ಇದ್ದಾರೆ. ಅತಿ ಹೆಚ್ಚು ಭಾಷೆಗಳು ಚಾಲ್ತಿಯಲ್ಲಿರುವ  ದೇಶದ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದರು.

ಮಸೂದೆಗೆ ಅನುಮೋದನೆ ಕೋರಿ ಮಾತನಾಡಿದ ಸಚಿವ ತಂಗಡಗಿ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ನೀಡಲಾಗಿದ್ದರೂ ಅನುದಾನವನ್ನು ಕೊಡುತ್ತಿಲ್ಲ. ನಮ್ಮ ಮೂಗಿಗೆ ತುಪ್ಪ ಸವರುವಂತೆ ಅನುದಾನ ಕೊಡಲಾಗುತ್ತಿದೆ. ಲೋಕಸಭೆ ಚುನಾವಣೆ ಬರುತ್ತಿದ್ದು, ಅನುದಾನ ಕೊಡಿಸುವ ಯತ್ನವನ್ನು ಪೂಜಾರಿ ಸಾಹೇಬರು ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉದ್ದೇಶಿಸಿ ಹೇಳಿದರು.

ಪ್ರಧಾನಿಯವರನ್ನು ಏಕವಚನದಲ್ಲಿ ಬೈದು, ಅನುದಾನ ಕೊಡಿ ಎಂದರೆ ಹೇಗೆ ಎಂದು ಪೂಜಾರಿ ಪ್ರಶ್ನಿಸಿದರು. ಅನುದಾನ ಕೊಡದೇ ಇದ್ದರೆ ಬೈಯದೇ ಇನ್ನೇನು ಮಾಡುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕೇಳಿದರು. 

ಮಸೂದೆ ಕುರಿತು ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಉಮಾಶ್ರೀ, ತೇಜಸ್ವಿನಿಗೌಡ,  ತಿಪ್ಪೇಸ್ವಾಮಿ, ಎಸ್.ವಿ. ಸಂಕನೂರ, ತಳವಾರ ಸಾಬಣ್ಣ , ಶಾಂತರಾಮ ಸಿದ್ದಿ, ಹೇಮಲತಾ ನಾಯಕ್, ಡಾ. ತಿಮ್ಮಯ್ಯ ಮಾತನಾಡಿದರು. 

ಬಳಿಕ ಮಸೂದೆಗೆ ಅನುಮೋದನೆ ನೀಡಲಾಯಿತು.

ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್‌ಗೆ
ಆಗ್ರಹ ಕನ್ನಡ ನಾಮಫಲಕ ಅಭಿಯಾನದಲ್ಲಿ ಪಾಲ್ಗೊಂಡ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಬೇಕು ಎಂದು ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು. ಹೋರಾಟ ಮಾಡದೇ ಇದ್ದರೆ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತರುತ್ತಿರಲಿಲ್ಲ. ಹಾಗಂತ ಹಿಂಸಾತ್ಮಕ ಹೋರಾಟವನ್ನು ನಾವು ಒಪ್ಪುವುದಿಲ್ಲ. ಕನ್ನಡಕ್ಕಾಗಿ ಹೋರಾಟ ನಡೆಸಿದ ವಿರುದ್ಧ ಗಂಭೀರ ಪ್ರಕರಣಗಳನ್ನು ಹೂಡಿದ್ದೂ ಸರಿಯಲ್ಲ ಎಂದು ಸದಸ್ಯರು ಪ್ರತಿಪಾದಿಸಿದರು. ಮೊಕದ್ದಮೆ ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜತೆ ಚರ್ಚಿಸುವುದಾಗಿ ಸಚಿವ ತಂಗಡಗಿ ಹೇಳಿದರು.
ಬದಲಾಗಿದೆ ಬೆಳಗಾವಿ: ಜಾರಕಿಹೊಳಿ
ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳು ಮರಾಠಿ ಮಯವಾಗಿದೆ ಎಂಬ ವಿಷಯ ಪರಿಷತ್ತಿನಲ್ಲಿ ಚರ್ಚೆಗೆ ಕಾರಣವಾಯಿತು. ಮಸೂದೆ ಕುರಿತ ಚರ್ಚೆ ವೇಳೆ ಮಾತನಾಡಿದ ಬಿಜೆಪಿಯ ತಳವಾರ ಸಾಬಣ್ಣ ಬೆಳಗಾವಿಯ ಗಡಿಭಾಗಗಳಲ್ಲಿ ಮರಾಠಿ ಭಾಷೆ ಬಳಕೆ ಮತ್ತು ನಾಮಫಲಕಗಳು ಇವೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಉಮಾಶ್ರೀ ನಿಪ್ಪಾಣಿ ಮರಾಠಿ ಮಯ; ಕನ್ನಡ ಮಾಯ ಎಂದು ಹೇಳಿದರು. ಇದನ್ನು ಅಲ್ಲಗಳೆದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘70ರ ದಶಕದ ಪರಿಸ್ಥಿತಿ ಆಧರಿಸಿ ನೀವು ಹೇಳುತ್ತಿದ್ದೀರಿ.ಬೆಳಗಾವಿ ಬದಲಾಗಿದೆ. ನಿಪ್ಪಾಣಿ ಖಾನಾಪುರ ಭಾಗದಲ್ಲಿ ಮರಾಠಿ ಮಾತನಾಡುವವರು  ಇದ್ದಾರೆ. ಅಲ್ಲಿಯೂ ಶೇ 70ರಷ್ಟು ಕನ್ನಡ ವಾತಾವರಣವೇ ಇದೆ. ಮರಾಠಿ ಭಾಷಿಗರು ಬೇರೆ ಮರಾಠರು ಬೇರೆ. ಎರಡೂ ಒಂದೇ ಅಲ್ಲ. ಬೆಳಗಾವಿ ಜಿಲ್ಲೆಯ ಜನ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸುತ್ತಾರೆ ಎಂದು ಪ್ರತಿಪಾದಿಸಿದರು.
ಕನ್ನಡಿಗರಿಗೆ ಉದ್ಯೋಗ; ಮಾಹಿತಿ ಕಡ್ಡಾಯ
ಕರ್ನಾಟಕದಲ್ಲಿರುವ ಕೈಗಾರಿಕೆಗಳು ಉದ್ದಿಮೆ ಸಂಸ್ಥೆಗಳಲ್ಲಿ ಉದ್ಯೋಗಿಗಳ ಭಾಷಿಕ ವಿವರವನ್ನು ಡ್ಯಾಷ್‌ಬೋರ್ಡ್‌ನಲ್ಲಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ತಂಗಡಗಿ ಹೇಳಿದರು. ಮುಖ್ಯಸಚೇತಕ ಸಲೀಂ ಅಹಮದ್ ಅವರು ಇಲ್ಲಿ ಉದ್ದಿಮೆ ಆರಂಭಿಸುವವರು ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಖಾತ್ರಿಪಡಿಸಲು ಕ್ರಮ ಆಗಬೇಕಿದೆ ಎಂದರು. ‘ಉದ್ದಿಮೆ ಆರಂಭಿಸಿದವರು ಯಾವ ಯಾವ ಭಾಷೆಯವರಿಗೆ ಉದ್ಯೋಗ ನೀಡಿದ್ದಾರೆ. ಅದರಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಎಂಬುದನ್ನು ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಡ್ಯಾಷ್‌ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT