ಹಾವೇರಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ವಿಳಂಬ ಧೋರಣೆ ತೋರಿದ ಆರೋಪದ ಮೇರೆಗೆ ಹಾನಗಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ಎಸ್.ಆರ್. ಮತ್ತು ಕಾನ್ಸ್ಟೆಬಲ್ ಇಲಿಯಾಜ್ ಶೇತಸನದಿ ಅವರನ್ನು ಎಸ್ಪಿ ಅಂಶುಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹಾನಗಲ್ ತಾಲ್ಲೂಕಿನ ನಾಲ್ಕರ ಕ್ರಾಸ್ ಸಮೀಪದ ಈಡಿಗಾಸ್ ಲಾಡ್ಜ್ನಲ್ಲಿ ಜ.8ರಂದು ಕೊಠಡಿಯಲ್ಲಿದ್ದ ಶಿರಸಿ ಮೂಲದ ಹಿಂದೂ ಪುರುಷ ಮತ್ತು ಮುಸ್ಲಿಂ ಮಹಿಳೆ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ನಂತರ ಯುವತಿಯನ್ನು ಹೊರಗಡೆ ಎಳೆದೊಯ್ದ ಆರೋಪಿಗಳು, ಆಕೆಗೆ ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಆ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಜ.10ರಂದು ರೂಂ ಬಾಯ್ ನೀಡಿದ ದೂರಿನ ಮೇರೆಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ‘ಅನೈತಿಕ ಪೊಲೀಸ್ಗಿರಿ’ ಪ್ರಕರಣ ಮಾತ್ರ ದಾಖಲಾಗಿತ್ತು.