ಬೆಂಗಳೂರು: ‘ಕೋಲಾರ ಲೋಕಸಭಾ ಟಿಕೆಟ್ನ್ನು ಸಚಿವ ಕೆ.ಎಚ್. ಮುನಿಯಪ್ಪ ಕುಟುಂಬದವರಿಗೆ ನೀಡಬಾರದು. ಬಲಗೈ ಸಮುದಾಯಕ್ಕೆ ನೀಡಬೇಕು’ ಎಂದು ಪಟ್ಟು ಹಿಡಿದಿರುವ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ನಜೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಬಂದರೂ ರಾಜೀನಾಮೆ ನೀಡದೆ ತೆರಳಿದರು.
ತಮ್ಮ ರಾಜೀನಾಮೆ ಪತ್ರವನ್ನು ಮಾಧ್ಯಮದವರಿಗೆ ಪ್ರದರ್ಶಿಸಿದ ಅವರು, ‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಜೊತೆ ಸಂಜೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಅಂದರು.
‘ಮುಖ್ಯಮಂತ್ರಿ ಒಂದು ದಿನದ ಕಾಲಾವಕಾಶ ಕೇಳಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ರಾಜೀನಾಮೆ ನೀಡದೆ ನಾವು ವಾಪಸ್ ಹೋಗುತ್ತೇವೆ’ ಎಂದು ಅನಿಲ್ಕುಮಾರ್ ಹೇಳಿದರು.
ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ‘ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಕೊಟ್ಟರೆ ರಾಜೀನಾಮೆ ಸ್ವೀಕರಿಸುವೆ. ಒತ್ತಾಯದಿಂದ ರಾಜೀನಾಮೆ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದರು.
‘ಅವರು ರಾಜೀನಾಮೆ ಕೊಟ್ಟಿಲ್ಲ. ಬಲವಂತದಿಂದ ಕಸಿದು ಕೊಳ್ಳಲು ಆಗಲ್ಲ. ನಾನು ಅವರ ಜೊತೆ ಮಾತನಾಡಿಲ್ಲ. ಕೈಯಲ್ಲೇ ಬರೆದು ಕೊಡಿ ಎಂದು ಹೇಳಿದ್ದೇನೆ. ಅವರು ಕೊಟ್ಟರೆ ಪಡೆಯುತ್ತೇನೆ. ಅವರು ಕೊಡದಿದ್ದರೆ ನಾವೇನು ಮಾಡೋಣ. ಅವರು ಬೆಳಗ್ಗೆ ಸಮಯ ಕೇಳಿದ್ದರು. ಅವರು ಕೊಡಲಿಲ್ಲ ಅಂದ್ರೆ ನಾವೇನು ಮಾಡೋಣ’ ಎಂದೂ ಹೇಳಿದರು.