ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ತಮಿಳುನಾಡು: ಭಾಷಣ ತಿರುಚಿದ ರಾಜ್ಯಪಾಲರ ಕ್ರಮ ಸಮರ್ಥನೀಯವಲ್ಲ

Last Updated 10 ಜನವರಿ 2023, 19:31 IST
ಅಕ್ಷರ ಗಾತ್ರ

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದ್ದಾರೆ. ತಮಿಳುನಾಡು ವಿಧಾನಸಭೆಯ ವರ್ಷದ ಮೊದಲ ಅಧಿವೇಶನದ ಮೊದಲ ದಿನ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ. ಅಧಿವೇಶನದ ಆರಂಭದ ದಿನದ ಭಾಷಣದ ಕೆಲವು ಭಾಗಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ ಮತ್ತು ತಮ್ಮದೇ ಕೆಲವು ಮಾತುಗಳನ್ನು ಸೇರಿಸಿದ್ದಾರೆ. ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಕಡತಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಸರ್ಕಾರವು ಸಿದ್ಧಪಡಿಸಿ, ಸದನವು ಅದನ್ನು ಅಂಗೀಕರಿಸಿದಾಗ ರಾಜ್ಯಪಾಲರು ಸದನದಿಂದ ಹೊರಗೆ ನಡೆದಿದ್ದಾರೆ. ಸದನವನ್ನು ಉದ್ದೇಶಿಸಿ ಮಾಡುವ ಸಾಂಪ್ರದಾಯಿಕ ಭಾಷಣಕ್ಕೆ ಏನನ್ನಾದರೂ ಸೇರಿಸುವ ಅಥವಾ ಅದರಿಂದ ಏನನ್ನಾದರೂ ತೆಗೆದುಹಾಕುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಈ ಭಾಷಣವು ರಾಜ್ಯ ಸರ್ಕಾರದ ನಿಲುವು ಮತ್ತು ನೀತಿಗಳ ಕುರಿತದ್ದಾಗಿರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದ ನಿಯಮಗಳು ಅತ್ಯಂತ ಸ್ಪಷ್ಟವಾಗಿವೆ. ಈ ಹಿಂದೆ ಇಂತಹ ಉಲ್ಲಂಘನೆ ಆಗಿರುವುದು ವಿರಳ. ಆದರೆ, ಉಲ್ಲಂಘನೆ ಆದಾಗ ಅದು ತಪ್ಪು ಮತ್ತು ಸ್ವೀಕಾರಾರ್ಹವಲ್ಲ ಎಂದೇ ಹೇಳಲಾಗಿತ್ತು. ಸಾಂಪ್ರದಾಯಿಕ ಭಾಷಣಕ್ಕೆ ರಾಜ್ಯಪಾಲರು ತಮ್ಮ ಮಾತುಗಳನ್ನು ಸೇರಿಸಿಕೊಂಡ ಪೂರ್ವನಿದರ್ಶನ ಇಲ್ಲ. ಹಾಗಿದ್ದರೂ ರವಿ ಅವರು ತಮ್ಮದೇ ಮಾತುಗಳನ್ನು ಸೇರಿಸಿಕೊಂಡಿರುವುದು ಸರಿಯಾದ ಕ್ರಮ ಅಲ್ಲವೇ ಅಲ್ಲ.

ರಾಜ್ಯಪಾಲರಿಗೆ ಇರುವ ಅಧಿಕಾರಗಳು ಏನು ಎಂಬುದನ್ನು ಸಂವಿಧಾನದಲ್ಲಿ ವಿವರಿಸಲಾಗಿದೆ. ಸುಪ್ರೀಂ ಕೋರ್ಟ್‌ ಈ ಹಿಂದೆ ಹಲವು ಬಾರಿ ನೀಡಿದ್ದ ತೀರ್ಪುಗಳಲ್ಲಿಯೂ ಅದನ್ನು ಸ್ಪಷ್ಟಪಡಿಸಲಾಗಿದೆ. ಈ ವಿಚಾರವು ಆಯೋಗಗಳಲ್ಲಿ ಸಮಾಲೋಚನೆಗೆ ಒಳಪಟ್ಟಿದೆ. ಹಲವು ವರದಿಗಳನ್ನು ಸಿದ್ಧಪ‍ಡಿಸಲಾಗಿದೆ. ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರ ಇಲ್ಲ ಎಂಬ ವಿಚಾರದಲ್ಲಿ ಸಹಮತಕ್ಕೂ ಬರಲಾಗಿದೆ. ರಾಜ್ಯದ ಚುನಾಯಿತ ಸರ್ಕಾರದ ಇಚ್ಛೆಗೆ ಅನುಗುಣವಾಗಿ ಅವರು ಕೆಲಸ ಮಾಡಬೇಕು ಎಂಬುದರಲ್ಲಿಯೂ ಯಾವುದೇ ಭಿನ್ನಮತ ಇಲ್ಲ. ಆದರೆ, ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿಯುತ್ತಿರುವುದು ಹೆಚ್ಚುತ್ತಲೇ ಇದೆ. ಆಡಳಿತದಲ್ಲಿ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಸರ್ಕಾರವನ್ನು ನಿರ್ಲಕ್ಷಿಸಲು ಕೂಡ ಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿಷ್ಠೆ ತೋರುವ ಭರದಲ್ಲಿ ರಾಜ್ಯ ಸರ್ಕಾರದ ಜೊತೆಗೆ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ರಾಜ್ಯಪಾಲರ ಈ ರೀತಿಯ ವರ್ತನೆಗಳಿಗೆ ಕೇಂದ್ರ ಸರ್ಕಾರದ ಸಮ್ಮತಿ ಮತ್ತು ಬೆಂಬಲ ಇದೆ ಎಂಬುದು ಸ್ಪ‍ಷ್ಟ. ವೈಯಕ್ತಿಕ ಮಹತ್ವಾಕಾಂಕ್ಷೆಯ ಕಾರಣಕ್ಕೆ ಕೆಲವು ರಾಜ್ಯಪಾಲರು ಹೀಗೆ ಮಾಡುತ್ತಿದ್ದಾರೆ. ಕೇಂದ್ರದ ಆಡಳಿತಾರೂಢ ಪಕ್ಷದ ರಾಜಕೀಯ ಸಿದ್ಧಾಂತದ ಜೊತೆಗೆ ಇರುವ ಒಲವಿನ ಕಾರಣಕ್ಕಾಗಿಯೂ ಕೆಲವು ರಾಜ್ಯಪಾಲರು ಹೀಗೆ ಮಾಡುತ್ತಿದ್ದಾರೆ. ರವಿ ಸೇರಿದಂತೆ ಕೆಲವು ರಾಜ್ಯಪಾಲರು ಸದನವು ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದೂ ಇದೆ. ಅದಲ್ಲದೆ, ಅತ್ಯಂತ ವಿವೇಚನಾರಹಿತವಾಗಿ ವರ್ತಿಸಿದ್ದೂ ಇದೆ. ನಮ್ಮ ರಾಜಕೀಯ ವ್ಯವಸ್ಥೆಯ ಪ್ರಮುಖ ಲಕ್ಷಣ
ವಾಗಿರುವ ಒಕ್ಕೂಟವಾದಕ್ಕೆ ಈ ರೀತಿಯ ವರ್ತನೆಗಳು ಭಾರಿ ಹಾನಿ ಮಾಡುತ್ತವೆ. ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ ಎಂಬುದು ಕೂಡ ಗಮನಾರ್ಹ.

ರವಿ ಅವರು ಕೈಬಿಟ್ಟ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಉಲ್ಲೇಖಿಸುವುದು ಬಹಳ ಮುಖ್ಯ. ಜಾತ್ಯತೀತತೆ ಮತ್ತು ದ್ರಾವಿಡ ಮಾದರಿ ಎಂಬ ಪದಗಳನ್ನು ಅವರು ಕೈಬಿಟ್ಟಿದ್ದಾರೆ. ಪೆರಿಯಾರ್‌, ಅಂಬೇಡ್ಕರ್‌, ಕೆ. ಕಾಮರಾಜ್‌, ಸಿ.ಎನ್‌. ಅಣ್ಣಾದೊರೆ, ಕರುಣಾನಿಧಿ ಮುಂತಾದವರ ಉಲ್ಲೇಖಗಳನ್ನೂ ಕೈಬಿಟ್ಟಿದ್ದಾರೆ. ರವಿ ಅವರು ಕೈಬಿಟ್ಟ ಪದಗಳು ಮತ್ತು ಹೆಸರುಗಳು ಕಳವಳವನ್ನು ಇನ್ನಷ್ಟು ಹೆಚ್ಚಿಸುತ್ತವೆ. ರವಿ ಮತ್ತು ಅವರು ನಿಷ್ಠೆ ಇರಿಸಿರುವ ರಾಜಕೀಯ ನಾಯಕರ ರಾಜಕೀಯ ಒಲವು ಇದು ಆಗಿರಬಹುದು. ಆದರೆ, ಅದನ್ನು ರಾಜ್ಯಗಳ ಮೇಲೆ ಹೇರುವುದು ಸಲ್ಲದು. ದ್ರಾವಿಡ ಮಾದರಿ ಮತ್ತು ತಮಿಳುನಾಡು ಎಂಬುದು ಪ್ರತಿಗಾಮಿಯಾದುದು, ಹಾಗಾಗಿ ರಾಜ್ಯದ ಹೆಸರನ್ನು ತಮಿಳಗಂ ಎಂದು ಬದಲಾಯಿಸಬೇಕು ಎಂದು ರವಿ ಅವರು ಪ್ರತಿಪಾದಿಸುತ್ತಿದ್ದಾರೆ. ರವಿ ಮತ್ತು ಅವರಂತಹ ಇತರ ರಾಜ್ಯಪಾಲರ ನಿಲುವು ಮತ್ತು ನಡವಳಿಕೆಗಳು ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಬದಲಿಗೆ, ಅದರಿಂದ ದೇಶಕ್ಕೆ ಆಗುವ ಹಾನಿ ಬಹಳ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT