ಹೈದರಾಬಾದ್, ಜ. 18 (ಪಿಟಿಐ, ಯುಎನ್ಐ)– ತೆಲುಗು ಚಿತ್ರರಂಗದ ಮೇರು ನಟ, ರಾಷ್ಟ್ರೀಯ ರಂಗದ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ (73) ಅವರು ಬಂಜಾರಾ ಹಿಲ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ ಹೃದಯಾಘಾತದಿಂದ ವಿಧಿವಶರಾದರು.
ತೆಲುಗು ದೇಶಂ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಎನ್ಟಿಆರ್ ಎಂದೇ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರಿಗೆ 6 ಮಂದಿ ಪುತ್ರರು, ನಾಲ್ವರು ಪುತ್ರಿಯರು ಮತ್ತು ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಮರಾವ್ ಅವರ ಅಳಿಯ. ಎನ್ಟಿಆರ್ ನಿಧನದಿಂದಾಗಿ ಆಂಧ್ರಪ್ರದೇಶದ ರಂಗುರಂಗಿನ ರಾಜಕೀಯ ಅಧ್ಯಾಯದಲ್ಲಿ ಒಂದು ಯುಗ ಮುಗಿದಂತಾಗಿದೆ.
ಸಂಭ್ರಮ, ಸಡಗರದ ನಡುವೆ ಪರ್ಯಾಯ ಪೀಠಾರೋಹಣ
ಮಂಗಳೂರು, ಜ. 18– ಊರಿನ ತುಂಬಾ ಹಸಿರು ತೋರಣ. ಉಡುಪಿ ಇಂದು ನಿದ್ದೆ ಮಾಡಿಲ್ಲ ಎಂಬುದನ್ನು ಸಾರುವಂತೆ ಎಲ್ಲೆಡೆ ಬೆಳಕಿನ ದೀಪಗಳ ಸಿಂಗಾರ. ರಾತ್ರಿಯೆಲ್ಲಾ ತೆರೆದ ಅಂಗಡಿಗಳು. ಬೆಳಗಿನ ವೇಳೆ ಎಷ್ಟು ಜನರಿಂದ ತುಂಬಿ ತುಳುಕುತ್ತಿದ್ದವೋ ಅಷ್ಟೇ ಜನರಿಂದ ತುಂಬಿದ್ದ ಬೀದಿಗಳು. ರಾಜ್ಯ ಹಾಗೂ ರಾಷ್ಟ್ರದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತರು. ಬೆಳಕು ಮೂಡಲು ಇನ್ನೂ ಬಹಳಷ್ಟು ಸಮಯ ಇರುವಂತೆಯೇ 4.45ಕ್ಕೆ ಸರಿಯಾಗಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವೋತ್ತಮ ತೀರ್ಥರು ಉಡುಪಿಯಲ್ಲಿ ಇಂದು ನಾಲ್ಕನೇ ಬಾರಿಗೆ ಪರ್ಯಾಯ ಪೀಠವನ್ನೇರಿದರು.