ರಾಜ್ಕೋಟ್: ತಾಯಿಯ ಅನಾರೋಗ್ಯದ ಕಾರಣ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಿಂದ ನಿರ್ಗಮಿಸಿದ್ದ ಆರ್.ಅಶ್ವಿನ್, ಇಂದು ವಾಪಸ್ ಆದರು. ರಾಜ್ಕೋಟ್ನಲ್ಲಿ ನಡೆದ ಪಂದ್ಯದ ಎರಡನೇ ದಿನ ಚೆನ್ನೈಗೆ ತೆರಳಿದ್ದ ಅವರು, ನಾಲ್ಕನೇ ದಿನದ ಟೀ ವಿರಾಮದ ಬಳಿಕ ಕಣಕ್ಕಿಳಿದರು.
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆಯುವುದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಿದ ಬೌಲರ್ಗಳ ಸಾಲಿಗೆ ಸೇರಿದ್ದ ಅಶ್ವಿನ್, ಕೆಲ ಹೊತ್ತಿನಲ್ಲೇ ತುರ್ತಾಗಿ ಚೆನ್ನೈಗೆ ತೆರಳಿದ್ದರು. ಮೂರನೇ ದಿನದಾಟದಲ್ಲಿ ಅವರ ಬದಲಿಗೆ ದೇವದತ್ತ ಪಡಿಕ್ಕಲ್ ಅವರು ಫೀಲ್ಡರ್ ಆಗಿ ಕಣಕ್ಕಿಳಿದರು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಅಶ್ವಿನ್ ಅವರು ಈ ಪಂದ್ಯದಲ್ಲಿ ಮತ್ತೆ ಆಡಲಿದ್ದಾರೆ ಎಂದು ನಾಲ್ಕನೇ ದಿನದಾಟದ ಮೊದಲ ಅವಧಿಯ ವೇಳೆ ತಿಳಿಸಿತ್ತು. ಅದರಂತೆ ಅಶ್ವಿನ್, ಚಹಾ ವಿರಾಮದ ಬಳಿಕ ತಂಡದಲ್ಲಿ ಆಡಿದರು.
ಈ ಅವಧಿಯಲ್ಲಿ 6 ಓವರ್ ಬೌಲಿಂಗ್ ಮಾಡಿದ ಅವರು 3 ಮೇಡನ್ ಸಹಿತ 19 ರನ್ ನೀಡಿ 1 ವಿಕೆಟ್ ಪಡೆದರು.
'ಕೌಟುಂಬಿಕ ತುರ್ತಿನ ಕಾರಣ ಸ್ವಲ್ಪ ಸಮಯ ಗೈರಾಗಿದ್ದ ರವಿಚಂದ್ರನ್ ಅಶ್ವಿನ್ ಅವರು ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ತಿಳಿಸಲು ಮಂಡಳಿಯು ಹರ್ಷಿಸುತ್ತದೆ. ಅವರು ಕೌಟುಂಬಿಕ ತುರ್ತು ಸ್ಥಿತಿಯ ಕಾರಣ 3ನೇ ಟೆಸ್ಟ್ನ 2ನೇ ದಿನದಾಟದ ವೇಳೆ ತಾತ್ಕಾಲಿಕವಾಗಿ ತಂಡದಿಂದ ಹಿಂದೆ ಸರಿದಿದ್ದರು' ಎಂದು ಬಿಸಿಸಿಐ ಪ್ರಕಟಿಸಿತ್ತು.
ಭಾರತಕ್ಕೆ ಜಯ
ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಾಯಕ ರೋಹಿತ್ ಶರ್ಮಾ (131 ರನ್) ಹಾಗೂ ರವೀಂದ್ರ ಜಡೇಜ (112 ರನ್) ಗಳಿಸಿದ ಶತಕಗಳ ಬಲದಿಂದ 1ನೇ ಇನಿಂಗ್ಸ್ನಲ್ಲಿ 445 ರನ್ ಕಲೆಹಾಕಿತ್ತು. ಈ ಮೊತ್ತದೆದುರು ಪ್ರವಾಸಿ ಪಡೆ 319 ರನ್ಗಳಿಗೆ ಆಲೌಟ್ ಆಗಿತ್ತು.
126 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ, ಯಶಸ್ವಿ ಜೈಸ್ವಾಲ್ ದ್ವಿಶತಕ (ಅಜೇಯ 214 ರನ್), ಶುಭಮನ್ ಗಿಲ್ (91 ರನ್) ಹಾಗೂ ಸರ್ಫರಾಜ್ ಖಾನ್ (ಅಜೇಯ 68 ರನ್) ಅರ್ಧಶತಗಳ ನೆರವಿನಿಂದ 4 ವಿಕೆಟ್ಗೆ 430 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
557 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 122 ರನ್ ಗಳಿಸಿ, 39.4 ಓವರ್ಗಳಲ್ಲೇ ಸರ್ವಪತನ ಕಂಡಿದೆ. ಇದರೊಂದಿಗೆ ಭಾರೀ ಮುಖಭಂಗ ಅನುಭವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.